ಗೇರು ಕೃಷಿ ಭವಿಷ್ಯದಲ್ಲಿ ರೈತರ ಕೈಹಿಡಿಯಬಹುದೇ
ಎಳೆ ಗೇರುಬೀಜ
ಗೇರು ಬೀಜ ಕರಾವಳಿಯ ವಾಣಿಜ್ಯ ಬೆಳೆಗಳಲ್ಲಿ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಆದರೆ ರಬ್ಬರ್ ಬೆಳೆಗೆ ಉತ್ತಮ ಬೆಲೆ ಬಂದಿದ್ದರಿಂದ ಗೇರು ಬೆಳೆ ಕಡಿಮೆಯಾಯಿತು. ಆದರೆ ಇತ್ತೀಚಿನ ದಿನಗಳನ್ನು ಗಮನಿಸಿದರೆ ಗೋಡಂಬಿಗೆ ಚಿನ್ನದಂತ ಬೆಲೆ ಸಿಗುತ್ತಿದೆ.
ಒಂದು ಕಾಲದಲ್ಲಿ ಕಾಸರಗೋಡು, ದ.ಕ., ಉಡುಪಿ ಜಿಲ್ಲೆಗಳಲ್ಲಿ ಗೇರು ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದರು. ಇನ್ನೂ ಕೆಲವರು ಅಡಿಕೆಯೊಂದಿಗೆ ಇದನ್ನು ಉಪ ಬೆಳೆಯಾಗಿ ಬೆಳೆಯುತ್ತಿದ್ದರು. ಇದೀಗ ಕಲವು ವರ್ಷಗಳಿಂದ ಅಡಿಕೆಗೆ ಹಳದಿ ರೋಗ ಕಾಣಿಸಿಕೊಂಡಿರುವ ಪರಿಣಾಮ ಹಾಗೂ ರಬ್ಬರ್ ಬೆಳಗೆ ಬಂದಿರುವ ಚಿನ್ನದ ಬೆಲೆಯಿಂದ ಗೇರು, ಅಡಿಕೆ ತೋಟವನ್ನು ರೈತರು ಕಡಿದು ಸಂಪೂರ್ಣ ರಬ್ಬರ್ ಕೃಷಿ ಮಾಡಲು ಹೊರಟಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಗೇರು ಬೆಳೆ ಕಡಿಮೆಯಾಗುತ್ತಿವೆ. ಗೋಡಂಬಿಯ ಬೇಡಿಕೆ ಜಾಸ್ತಿಯಾಗುತ್ತಿರುವುದರ ಪರಿಣಾಮ ವರ್ಷದಿಂದ ವರ್ಷಕ್ಕೆ ಗೇರು ಬೀಜಕ್ಕೆ ಮಾರುಕಟ್ಟೆ ಧಾರಣೆ ಜಾಸ್ತಿಯಾಗುತ್ತಿವೆ.
ಗೇರುವಿನಲ್ಲಿ ನಾಟಿ ತಳಿಗಳು, ಉಳ್ಳಾಲ 3, ಎನ್.ಡಿ.ಆರ್ 200 ಹೀಗೆ ಅನೇಕ ತಳಿಗಳಿವೆ. ಗೇರು ಬೆಳೆಗಳನ್ನು ಉಷ್ಣ ಭೂಮಿಯಲ್ಲಿ ಸಮತಟ್ಟಾದ ಮತ್ತು ಇಳಿಜಾರು ಪ್ರದೇಶಗಳಲ್ಲೂ ಬೆಳೆಯ ಬಹುದು. ಇದಕ್ಕೆ ನೀರಿನ ಅವಶ್ಯಕತೆ ಬಹಳ ಕಡಿಮೆ. ಗೇರು ಬೆಳೆಗೆ ಅಲ್ಪ ಸ್ವಲ್ಪ ರಾಸಾಯನಿಕ ಗೊಬ್ಬರಗಳನ್ನು ರೈತರು ಉಪಯೋಗಿಸುತ್ತಾರೆ. ಮೂರು ವರ್ಷಗಳಲ್ಲಿ ಕಸಿ ಗೇರು ಗಿಡ ಫಸಲು ನೀಡುತ್ತದೆ. ನಾಟಿ ತಳಿಗಳಾದರೆ ಐದು ವರ್ಷಗಳು ಬೇಕಾಗುತ್ತವೆ. ಇನ್ನೂ ಕೆಲವೆಡೆ ಹವಾಮಾನ ಮತ್ತು ಆರೈಕೆಗನುಗುಣವಾಗಿ ಗೇರು ಫಸಲು ನೀಡುತ್ತದೆ. ಗೇರು ಡಿಸೆಂಬರ್ ತಿಂಗಳಲ್ಲಿ ಹೂ ಬಿಟ್ಟು ಜನವರಿ ಪೆಬ್ರವರಿ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
ಕಳೆದ ವರ್ಷ ಜನವರಿ ಪೆಭ್ರವರಿ ತಿಂಗಳಲ್ಲಿ ಗೇರು ಬೀಜಕ್ಕೆ ಕೇಜಿಯೊಂದಕ್ಕೆ 70 ರಿಂದ 80 ರೂಪಾಯಿ ಮಾರುಕಟ್ಟೆ ಧಾರಣೆ ಇತ್ತು. ಈ ಬಾರಿ ಗೇರು ಬೆಳೆ ಕಡಿಮೆಯಾಗಿರುವುದರಿಂದ ಗೇರು ಬೀಜಕ್ಕೆ ಬಹಳ ಬೇಡಿಕೆಯಿದ್ದು ಕೇಜಿಯೊಂದಕ್ಕೆ 100 ರೂಪಾಯಿಯಷ್ಟು ಮಾರುಕಟ್ಟೆ ಧಾರಣೆ ಬರಹುದೆಂದು ಗೇರು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದ ಅಲ್ಪ ಸ್ವಲ್ಪ ಗೇರು ತೋಟವಿದ್ದ ರೈತರ ಮೊಗದಲ್ಲಿ ಹೊಸ ಆಶಾಕಿರಣ ಮೂಡುತ್ತಿದೆ.
Author : ತೇಜೇಶ್ವರ್ ಕುಂದಲ್ಪಾಡಿ
Share :
More Articles From Agriculture