BW News Bureau : 2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಇನ್ನೂ ಮುಂದುವರೆದಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 12 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯಲ್ಲಿ ನಿರತನಾಗಿರುವ ಅಭ್ಯರ್ಥಿ ಶಂಕರ ಗೌಡಿ ಅಸ್ವಸ್ಥನಾಗಿದ್ದು, ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲದೇ ಕೆಪಿಎಸ್ ಸಿ ಅಭ್ಯರ್ಥಿಗಳ ಪ್ರತಿಭಟನೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸಾಥ್ ನೀಡಿದ್ದಾರೆ. ಕೆಪಿಎಸ್ ಸಿ ಅಕ್ರಮದ ಬಗ್ಗೆ ಬಹಿರಂಗ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಜವಾಬು ಬಳಿಕ ಸಿದ್ದರಾಮಯ್ಯ, ಸರ್ಕಾರದ ಕ್ರಮ ಸರಿಯಾಗೇಯೇ ಇದೆ. ಚರ್ಚೆಗೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ 12 ಪ್ರಶ್ನೆಗಳನ್ನು ಇಟ್ಟಿದ್ದು, ಅವುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸುತ್ತಾರೆಯೇ ಎಂಬ ಕುತೂಹಲ ಕೆರಳಿದೆ.
ಕುಮಾರಸ್ವಾಮಿ ಪ್ರಶ್ನೆಗಳು ಹೀಗಿವೆ:
1. ಅಡ್ವಕೇಟ್ ಜನರಲ್ ಅವರು ಸರ್ಕಾರವನ್ನು ಕೇಳದೇ ಅಭಿಪ್ರಾಯ ನೀಡಿದ್ದಾರೆಯೇ?
2. ನೊಂದ ಅಭ್ಯರ್ಥಿಯ ಸಂದರ್ಶನ 2013ರ ಮೇ 10ಕ್ಕೆ ನಡೆದು, ನಂತರ ಮಾರನೇ ದಿನ ಸಂದರ್ಶನದ ಅಂಕ ಪ್ರಕಟ ಮಾಡಿದ್ದರೂ ನೊಂದ ಅಭ್ಯರ್ಥಿ ಬ್ಯಾಚ್ ನ ಸಂದರ್ಶನ ಪೂರ್ಣವಾಗುವವರೆಗೆ ಸುಮ್ಮನಿದ್ದು ವಿಳಂಬವಾಗಿ ದೂರು ನೀಡಿದ್ದರ ಬಗ್ಗೆ ಸರ್ಕಾರ ಸಮಜಾಯಿಷಿ ಪಡೆದುಕೊಂಡಿದೆಯೇ? ನಡೆದಿದೆ ಎನ್ನಲಾದ ಅಕ್ರಮವನ್ನು ಮುಚ್ಚಿಟ್ಟು ವೈಯಕ್ತಿಕವಾಗಿ ತೊಂದರೆ ಆದಾಗ ವಿಳಂಬವಾಗಿ ದೂರು ನೀಡುವುದು ಅಕ್ರಮವಲ್ಲವೇ?
3. ಆಯ್ಕೆ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗುವ 9 ತಿಂಗಳು ಮೊದಲೇ ಅಡ್ವೋಕೇಟ್ ಜನರಲ್ ರವರು ನೀಡಿರುವ ಅಭಿಪ್ರಾಯ ಪೂರ್ವನಿಯೋಜಿತ ಮತ್ತು ಸಂಶಯಕ್ಕೆ ಎಡಮಾಡಿಕೊಟ್ಟಿಲ್ಲವೇ?
4. ಮಂಗಳಾ ಶ್ರೀಧರ್ ಅವರೊಬ್ಬರೆ ಕಮಿಟಿಯಲ್ಲಿ ಇದ್ದರೇ? ಇಲ್ಲವಾದಲ್ಲಿ ಕಮಿಟಿಯಲ್ಲಿ ಇದ್ದ ಇತರ ಸದಸ್ಯರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?
5. 2014ರ ಮಾರ್ಚ್ 5ರಂದು ತಾತ್ಕಾಲಿಕ ಪಟ್ಟಿ ಪ್ರಕಟವಾಗುವ ಮೊದಲೇ, 2013ರ ಅಕ್ಟೋಬರ್ 15ರಂದು ಸರ್ಕಾರ ಮುಖ್ಯಪರೀಕ್ಷೆಯ ಮೌಲ್ಯಮಾಪನ ಮತ್ತು ಮೌಖಿಕ ಸಂದರ್ಶನದಲ್ಲಿ ನೀಡಿದ ಅಕಗಳನ್ನು ರದ್ದುಪಡಿಸಲು ಆದೇಶಿಸಿರುವುದು, ಈ ಬ್ಯಾಚನ್ನು ರದ್ದುಪಡಿಸಿರುವುದು ಪೂರ್ವನಿಯೋಜಿತವಲ್ಲವೇ?
6. ನೊಂದ ಅಭ್ಯರ್ಥಿಗಳಲ್ಲದೇ ರಘು, ಮಧು ಬೆಂಡರವಾಡಿ (ಎಸ್.ಸಿ) ನವೀನ್ ಪ್ರಸಾದ್ (ಎಸ್.ಸಿ), ಕೆ.ಆರ್.ಶ್ರೀನಿವಾಸ್, ಮಹದೇವಸ್ವಾಮಿ ಮತ್ತು ಹರೀಶ್ ಅವರಿಗೆ ಕ್ರಮವಾಗಿ ಮುಖ್ಯಪರೀಕ್ಷೆಯಲ್ಲಿ 1078.5, 1032, 1048,1008, 1000 ಮತ್ತು 1054 ಅಂಕ ಪಡೆದಿದ್ದರೂ ಸಂದರ್ಶನದಲ್ಲಿ ಕ್ರಮವಾಗಿ 75, 60, 60, 80, 90 ಮತ್ತು 60 ಅಂಕ ಮಾತ್ರ ನೀಡಿರುವುದನ್ನು ಸರ್ಕಾರ ಗಮನಿಸಿಲ್ಲವೇ? ಕೆಲವರು ನೊಂದ ಅಭ್ಯರ್ಥಿಗಿಂತ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದು, ಆದರೆ ಸಂದರ್ಶನದಲ್ಲಿ ಕಡಿಮೆ ಅಂಕ ಪಡೆದಿರುವುದನ್ನು ಸರ್ಕಾರ ಗಮನಿಸಿಲ್ಲವೇ?
7. ಒಬ್ಬ ಅಭ್ಯರ್ಥಿಯ ದೂರಿಗೆ ಪ್ರಾಶಸ್ತ್ಯ ನೀಡಿ 362 ಅಭ್ಯರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿರುವುದು ಸಮಂಜಸವೇ?
8. ಸರ್ಕಾರದ ನಿರ್ಧಾರದಂತೆ ಪುನ: ಪರೀಕ್ಷೆಗಾಗಿ ಆಯ್ಕೆ ಪಟ್ಟಿ ಪ್ರಕಟಗೊಂಡ ನಂತರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನೊಂದ ಅಭ್ಯರ್ಥಿಗಳು ದೂರು ಕೊಟ್ಟರೆ ಆಗ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ?
9. ನಿರುದ್ಯೋಗಿ ಯುವಕ-ಯುವತಿಯರು ಯಾವ ನಂಬಿಕೆ ಮೇಲೆ ಮತ್ತೆ ಪರೀಕ್ಷೆ ಬರೆಯಬೇಕು?
10. ಸಿಐಡಿ ವರದಿಯಲ್ಲಿ ಓರಲ್ ಡಾಕ್ಯುಮೆಂಟರಿ ಎವಿಡೆನ್ಸ್ (ಮೌಖಿಕ ಸಾಕ್ಷ್ಯಾಧಾರ) ಆಧಾರದ ಮೇಲೆ ಮತ್ತು ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳನ್ನು ವಂಚಿಸಲು ಮತ್ತು ಅನರ್ಹ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂದರ್ಶನ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗಿದೆ. ಹಾಗಾದರೆ ಓರಲ್ ಡಾಕ್ಯುಮೆಂಟರಿ ಎವಿಡೆನ್ಸ್ ಎಂದರೆ ಏನು ಎಂಬುದನ್ನು ಬಹಿರಂಗಪಡಿಸುವಿರಾ?
11. ಸಿಐಡಿ ವರದಿ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಆಯ್ಕೆ ಪಟ್ಟಿ ರದ್ದುಪಡಿಸುವ ತರಾತುರಿ ಏಕೆ?
12. ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಆಯ್ಕೆಗೊಂಡ ಅಭ್ಯರ್ಥಿಗಳ ಪರ ಬಂದರೆ ಆಗ ಈಗಿನ ಪಟ್ಟಿ ಮತ್ತು ಹೊಸದಾಗಿ ಪರೀಕ್ಷೆ ನಡೆಸಿದ ನಂತರ ಬರುವ ಆಯ್ಕೆ ಪಟ್ಟಿಯ ಬಗ್ಗೆ ಯಾವ ರೀತಿ ಕ್ರಮ ಜರುಗಿಸುತ್ತೀರಿ?