ಬೆಂಗಳೂರು : ಕೃಷ್ಣ ಜನ್ಮಾಷ್ಠಮಿಯನ್ನು ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಶ್ರೀ ಕೃಷ್ಣ ಜಯಂತಿ ಹೆಸರಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಬೆಂಗಳೂರು ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆ.17ರಂದು ಕೃಷ್ಣ ಜಯಂತಿಯನ್ನು ರಜಾರಹಿತ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಸೂಚಿಸಲಾಗಿದೆ.
ಕೃಷ್ಣ ಜಯಂತಿ ಆಚರಣೆಗೆ ರಾಜ್ಯದ ಎಲ್ಲಾ 30 ಜಿಲ್ಲಾ ಕೇಂದ್ರಗಳಿಗೆ ತಲಾ 50 ಸಾವಿರ ರೂ.ನಂತೆ ಒಟ್ಟು 15 ಲಕ್ಷ ರೂ.ಮತ್ತು176 ತಾಲೂಕುಗಳಿಗೆ ತಲಾ 25 ಸಾವಿರ ರೂ ನಂತೆ 44 ಲಕ್ಷ ರೂ. ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಿದೆ.
ರಾಜ್ಯಮಟ್ಟದಲ್ಲಿ ಈ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ 10 ಲಕ್ಷ ರೂ. ನೀಡುವಂತೆಯೂ ಸೂಚಿಸಿದೆ. ರಾಜ್ಯ ಯಾದವ ಸಂಘದ ಕೋರಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಅಲ್ಲದೇ ಪ್ರಸಕ್ತ ಸಾಲಿನಿಂದ ಭಗೀರಥ ಜಯಂತಿಯನ್ನು ಕೂಡ ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 69 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ.