ಬೆಂಗಳೂರು : 2011ನೇ ಸಾಲಿನ ಕೆ.ಪಿ.ಎಸ್.ಸಿ ನೇಮಕಾತಿ ಆಯ್ಕೆ ಪಟ್ಟಿ ರದ್ದತಿ ವಿರೋಧಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಂಸದ ಹೆಚ್.ವಿಶ್ವನಾಥ್ 13 ಪ್ರಶ್ನೆಗಳನ್ನು ಕೇಳಿದ್ದಾರೆ.
ಆಯ್ಕೆಯಾಗಿರುವ 362 ಅಭ್ಯರ್ಥಿಗಳ ಪೈಕಿ 127 ಅಭ್ಯರ್ಥಿಗಳು ಕುಮಾರಸ್ವಾಮಿ ಕಡೆಯವರು ಎಂಬ ಮಾಹಿತಿ ಇದೆ. ಇದು ನಿಜವೇ ಎಂದು ನೇಮಕಾತಿ ರದ್ದತಿ ವಿರುದ್ಧ ಹೆಚ್.ಡಿ.ಕೆಗೆ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಕೆ.ಪಿ.ಎಸ್.ಸಿ ಕಳೆದ 20 ವರ್ಷಗಳಿಂದ ಕುಮಾರಸ್ವಾಮಿ ಅವರ ಕುಟುಂಬದ ಹಿಡಿತದಲ್ಲೇ ಇದೆ. ಕೆ.ಪಿ.ಎಸ್.ಸಿಯ ಮಾಜಿ ಅಧ್ಯಕ್ಷ ಹೆಚ್.ಎನ್ ಕೃಷ್ಣ ಅವರನ್ನು ನೇಮಕ ಮಾಡುವ ಮುನ್ನ ಲೋಕಸೇವಾ ಆಯೋಗದಲ್ಲಿ ಯಾವುದೇ ಆರೋಪ ಕೇಳಿಬಂದಿರಲಿಲ್ಲ. ಆದರೆ ದೇವೇಗೌಡರ ಕುಟುಂಬದವರು, ಕೃಷ್ಣ ಅವರನ್ನು ಕೆ.ಪಿ.ಎಸ್.ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಹೆಚ್.ಡಿ.ಕೆಗೆ ವಿಶ್ವನಾಥ್ ಕೇಳಿರುವ 13 ಪ್ರಶ್ನೆಗಳು ಇಂತಿವೆ:
*362 ಅಭ್ಯರ್ಥಿಗಳ ಪೈಕಿ 127 ಅಭ್ಯರ್ಥಿಗಳು ನಿಮ್ಮ ಕಡೆಯವರೆಂಬ ಮಾಹಿತಿ ಇದೆ ಸತ್ಯವೇ?
*362 ಅಭ್ಯರ್ಥಿಗಳ ಪೈಕಿ ಪ್ರತಿಭಟನೆ ನಡೆಸುತ್ತಿರುವವರು ಕೇವಲ 52 ಜನರು ಮಾತ್ರ ಉಳಿದವರು ಎಲ್ಲಿ?
*ಕೆ.ಪಿ.ಎಸ್.ಸಿ ನೇಮಕಾತಿ ಹಗರಣದ ಸಂಬಂಧ ದಲಿತ ಮಹಿಳೆಯೊಬ್ಬರ ಕರೆ ವಿವರ ಪಡೆಯಲು ಅನುಮತಿ ಇದೆಯೇ? ಯಾರು ಅನುಮತಿ ನೀಡಿದರು?
*ಕೆ.ಪಿ.ಎಸ್.ಸಿ ನೇಮಕಾತಿ ಹಗರಣದ ವಿಚಾರಣೆ ನಡೆಸಲು ನ್ಯಾ.ವಘೇಲಾ ಹಿಂದೇಟು ಹಾಕಿದ್ದೇಕೆ?
*ನ್ಯಾ.ವಘೇಲಾ ಅವರಿಗೆ ಅನಾಮಧೇಯ ಪತ್ರ ಬರೆದು ಬೆದರಿಕೆ ಹಾಕಿದ್ದು ಯಾರು?
*ಕೆ.ಪಿ.ಎಸ್.ಸಿ ಆಯ್ಕೆ ಪಟ್ಟಿ ರದ್ದತಿ ಕಾನೂನು ವಿಷಯ ಇಂತಹ ವಿಷಯವನ್ನು ರಾಜಕಾರಣ, ಜಾತಿ ವಿಷಯ ಮಾಡುತ್ತಿರುವುದು ಎಷ್ಟು ಸರಿ?
*ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ ಕೃಷ್ಣ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದೇಕೆ?
*ಗೋನಾಳ್ ಭೀಮಪ್ಪ ಅವರ ಪರ ಮಾತನಾಡುತ್ತಿರುವುದೇಕೆ?
*ಇಷ್ಟೆಲ್ಲಾ ನಡೆದರೂ ಕೆ.ಪಿ.ಎಸ್.ಸಿ ಮಾಜಿ, ಹಾಲಿ ಅಧ್ಯಕ್ಷರು ಸುಮ್ಮನಿರುವುದೇಕೆ?
*20 ವರ್ಷಗಳಿಂದ ಕೆ.ಪಿ.ಎಸ್.ಸಿ ದೇವೇಗೌಡರ ಕುಟುಂಬದ ಹಿಡಿತದಲ್ಲಿದೆ
*ಪ್ರತಿಭಟನೆ ನಡೆಸುತ್ತಿರುವ 362 ಅಭ್ಯರ್ಥಿಗಳು ನಿರುದ್ಯೋಗಿಗಳಾ?
*362 ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿದ್ದು ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ, ಇಂತಹವರ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?
ಅಂತಿಮವಾಗಿ ಕೆ.ಪಿ.ಎಸ್.ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬದವರು ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವವರ ರೀತಿ ವರ್ತಿಸುತ್ತಿರುವುದು ಏಕೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಾಜಿ ಸಂಸದ ವಿಶ್ವನಾಥ್ ಪ್ರಶ್ನಿಸಿದ್ದಾರೆ.