BW News Bureau : ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆ.15ರಂದು ಮುಖ್ಯ ಕಾರ್ಯಕ್ರಮನಡೆಯುವ ಮಾಣಿಕ್ ಷಾ ಪರೇಡ್ ಮೈದಾನಕ್ಕೆ 1500 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಬಗ್ಗೆ ವಿವರ ನೀಡಿರುವ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, 68ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು.
ಕಳೆದ 15 ದಿನಗಳಿಂದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ನಗರದ ಹೋಟೆಲ್, ಲಾಡ್ಜ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಜನಸಂದಣಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಆ.15ರಂದು ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಬಿಗಿ ಬಂದೋಬಸ್ತ್ ಗಾಗಿ 9 ಡಿಸಿಪಿ, 16 ಎಸಿಪಿ, 48 ಇನ್ಸ್ ಪೆಕ್ಟರ್, 101 ಪಿಎಸ್ ಐ,15 ಮಹಿಳಾ ಪಿಎಸ್ ಐ,77 ಎ ಎಸ್ ಐ,182 ಹೆಡ್ ಕಾನ್ ಸ್ಟೇಬಲ್, 459 ಕಾನ್ ಸ್ಟೇಬಲ್ಸ್, 94 ಮಹಿಳಾ ಸಿಬ್ಬಂದಿ,182 ಮಫ್ತಿ ಪೊಲೀಸರು ಸೇರಿ ಒಟ್ಟು1183 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಇದಲ್ಲದೇ 6 ಕೆ ಎಸ್ ಆರ್ ಪಿ ತುಕಡಿ, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 5 ಶ್ವಾನದಳ, ಬಾಂಬ್ ನಿಷ್ಕ್ರಿಯ ದರ ಹಾಗೂ ಭಯೋತ್ಪಾದಕ ನಿಗ್ರಹ ದಳ ಸಿಬ್ಬಂದಿ ಭದತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.