ಇಸ್ಲಾಮಾಬಾದ್ : ಸರ್ಕಾರದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದ ಮಾಜಿ ಕ್ರಿಕೆಟಿಗ, ಪಾಕ್ ರಾಜಕಾರಣಿ ಇಮ್ರಾನ್ ಖಾನ್ ಕಾರಿನ ಮೇಲೆ 15 ಗುಂಡಿನ ದಾಳಿ ನಡೆದಿದೆ. ಪ್ರಾಣಾಪಾಯದಿಂದ ಇಮ್ರಾನ್ ಖಾನ್ ಬಚಾವಾಗಿದ್ದಾರೆ.
ತಮ್ಮ ಮೇಲೆ ಗುಂಡಿನ ದಾಳಿ ನಡೆದಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, ತಾವು ಯಾವುದಕ್ಕೂ ಹೆದರುವುದಿಲ್ಲ. ಆಜಾದಿ ಮಾರ್ಚ್(ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ) ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ತೆಹ್ರಿಕ್ ಇ- ಇನ್ಸಾಫ್ ಪಕ್ಷದ ಮುಖಂಡ ಅನಿಲ ಖಾನ್ ಇಮ್ರಾನ್ ಖಾನ್ ತೆರಳುತ್ತಿದ್ದ ಕಾರ್ ಮೇಲೆ ಗುಜ್ರಾನ್ವಾಲಾ ಎಂಬ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು ಯಾವುದೆ ಹಾನಿಯುಂಟಾಗಿಲ್ಲ ಎಂದು ತಿಳಿಸಿದ್ದಾರೆ. ಪಾಕ್ ಪ್ರಧಾನಿ, ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನಿಸಿದರೂ ಹೋರಾಟ ಮುಂದುವರೆಸುವುದಾಗಿ ಖಾನ್ ಹೇಳಿದ್ದಾರೆ.
ಪಾಕಿಸ್ತಾನದ್ಲಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದರಿಂದ ಭದ್ರತೆ ಒದಗಿಸಲಾಗಿದ್ದು, ಅಹಿತಕರ ಘಟನೆ ಸಂಭವಿಸದಂತೆ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ಪ್ರತಿಭಟನಾ ರ್ಯಾಲಿ ತೆರಳುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಜಮಾನ್ ಪಾರ್ಕ್ನಿಂದ 'ಆಜಾದಿ ನಡಿಗೆ' ಪ್ರಾರಂಭಿಸಿದ ಇಮ್ರಾನ್ ಖಾನ್ ಹಾಗೂ ಕೆನಡಾ ಮೂಲದ ಮೌಲ್ವಿ ತಾಹಿರುಲ್ ಖಾದ್ರಿ ನೇತೃತ್ವದ ಗುಂಪು ಮಾಡೆಲ್ ಟೌನ್ನಿಂದ 'ಇನ್ಕ್ವಿಲಾಬ್ ನಡಿಗೆ' ಪ್ರಾರಂಭಿಸಿದೆ. 'ನಮಗೋಸ್ಕರ ಅಲ್ಲ, ನಿಮ್ಮ ಮಕ್ಕಳ ಒಳಿತಿಗಾಗಿ ಮತ್ತು ನೀವು ನೈಜ ಸ್ವಾತಂತ್ರ್ಯ ಬಯಸಿದ್ದಲ್ಲಿ ಈ ನಡಿಗೆಯಲ್ಲಿ ಸೇರಿಕೊಳ್ಳಿ' ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನಾಯಕರು ಪಾಕ್ ಜನತೆಗೆ ಕರೆ ನೀಡಿದರು.