ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 24 ಜನರು ಬಲಿಯಾಗಿದ್ದಾರೆ.
ಕಳೆದ ವರ್ಷವಷ್ಟೇ ಭೀಕರ ಪ್ರವಾಹ ಹಿಮಾಲಯನ್ ಸುನಾಮಿಗೆ ಸಿಲುಕಿ ತತ್ತಗೊಂಡಿದ್ದ ಉತ್ತರಾಖಂಡದಲ್ಲಿ ಈ ವರ್ಷವೂ ವರಣುನ ಆರ್ಭಟ ಜೋರಾಗಿದೆ. ಕಳೆದರಡು ದಿನಗಳ ಹಿಂದೆಯೇ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು. ಹಮೀಪುರದ ಕುಹನಾಖಡ್, ಉನಾ, ಪುರಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಸೇತುವೆಗಳು ಕುಸಿದಿವೆ.
ಡೆಹ್ರಾಡೂನ್ ಬಳಿಯ ಕೆಶನ್ ಪುರ್ ನಲ್ಲಿ ಭೂ ಕುಸಿತ ಉಂಟಾಗಿದ್ದು ಇಲ್ಲಿನ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಈ ಭಾಗದ ಜನರ ರಕ್ಷಣೆ ಕೂಡ ಕಷ್ಟಕರವಾಗಿದೆ ಪ್ರತಿಕೂಲ ಹವಾಮಾನವಿರುವುದರಿಂದ ರಕ್ಷಣೆಗಾಗಿ ಹೆಲಿಕಾಪ್ಟರ್ ಹಾರಾಟ ಕೂಡ ಕಷ್ಟಕರವಾಗಿದೆ. ಸಾವಿರಾರು ಮನೆಗಳು ನೆಲಸಮವಾಗಿದ್ದು, ಅಲ್ಲಲ್ಲಿ ಆಶ್ರಯ ಶಿಬಿರಗಳನ್ನು ತೆರೆಯಲಾಗಿದೆ.
ಗಂಗಾನದಿ ಅಪಾಯದ ಮಟ್ಟ ತಲುಪಲು ಕೇವಲ ಒಂದುವರೆ ಅಡಿ ಮಾತ್ರ ಬಾಕಿಯಿದೆ. ಪ್ರವಾಹದ ಮಟ್ಟ ಸ್ವಲ್ಪ ಏರಿಕೆಯಾದರೂ ಪ್ರಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಇನ್ನು ಎರಡುದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.