ಬಳ್ಳಾರಿ : ನನ್ನ ವಿರುದ್ಧ ಎಸ್.ಆರ್.ಹಿರೇಮಠ ಮಾದುತ್ತಿರುವ ಭೂ ಕಬಳಿಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಾಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಬಳಿ ನನ್ನ ವಿರುದ್ಧ ಯಾವುದೇ ಸಾಕ್ಷಾಧಾರಗಳಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಶ್ನಿಸಲಿ ಎಂದು ತಿರುಗೇಟು ನೀಡಿದರು.
ನಾನು ಭೂಮಿ ಖರೀದಿಸುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಒಂದು ವೇಳೆ ಅದರಲ್ಲಿ ಅಕ್ರಮ ಕಂಡುಬಂದರೆ ಸರ್ಕಾರ ಭೂಮಿಯನ್ನು ಹಿಂಪಡೆಯಲಿ. ಹಿರೇಮಠ ನಿರಾಧಾರಾವಾಗಿ ಸುದ್ಧಿಗೋಷ್ಠಿಗಳನ್ನು ನಡೆಸಿ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.
ಇನ್ನು ಪಡಿತರ ಚೀಟಿದಾರರಿಗೆ ನಾನು ಬೆದರಿಕೆ ಹಾಕುತ್ತಿದ್ದೇನೆ ಎಂಬ ಸಂಸದ ಬಿ.ಶ್ರೀರಾಮುಲು ಅವರ ಆರೋಪದಲ್ಲಿಯೂ ಯಾವುದೇ ಸತ್ಯಾಂಶವಿಲ್ಲ. ನಮ್ಮದು ಬೆದರಿಕೆ ಹಾಕುವ ಸಂಸ್ಕೃತಿಯಲ್ಲ ಎಂದು ಇದೇ ವೇಳೆ ತಿಳಿಸಿದರು.