ನವದೆಹಲಿ : 'ಭಾರತ'ದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳು ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಇಸ್ಲಾಮಾಬಾದ್ ಗೆ ಭೇಟಿ ನೀಡಲಿರುವ ಸಂದರ್ಭದಲ್ಲೇ, ಪ್ರತ್ಯೇಕವಾದಿಯೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿ ಅಬ್ದುಲ್ ಬಾಸಿತ್ ಗೆ ಅವಕಾಶ ನೀಡಿರುವುದು ಎನ್.ಡಿ.ಎ ಸರ್ಕಾರದ ರಾಜತಾಂತ್ರಿಕ ವೈಫಲ್ಯವನ್ನು ತೋರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ.
ಕಾಶ್ಮೀರದ ಪ್ರತ್ಯೇಕವಾದಿಗಳೊಂದಿಗೆ ಪಾಕ್ ರಾಯಭಾರಿಗಳು ಮಾತುಕತೆ ನಡೆಸುತ್ತಿದ್ದರೂ ಎನ್.ಡಿ.ಎ ಸರ್ಕಾರ ಸುಮ್ಮನಿರುವುದೇಕೆ ಎಂದು ಮನೀಶ್ ತಿವಾರಿ ಪ್ರಶ್ನಿಸಿದ್ದಾರೆ. ಇದೇ ವೇಳೆ ಎನ್.ಡಿ.ಎ ಸರ್ಕಾರ ದ್ವಂಧ್ವ ನಿಲುವು ಅನುಸರಿಸುತ್ತಿದೆ ಎಂದು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಆರೋಪಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ನಡೆಸಲು ಮಸುಜಾತಾ ಸಿಂಗ್, ಆ.25ರಂದು ಪಾಕ್ ರಾಜಧಾನಿ ಇಸ್ಲಾಮಾಬಾದ್ ಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿ ನಾಯಕಸಯೀದ್ ಗಿಲಾನಿಗೆ ನವದೆಹಲಿಯಲ್ಲಿರುವ ಪಾಕ್ ರಾಯಭಾರಿ ಕಚೇರಿ ಮಾತುಕತೆಗೆ ಆಹ್ವಾನ ನೀಡಿದೆ. ಈ ಬೆಳವಣಿಗೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.