ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದ ಕೌಸರ್ ನಾಗ್ ಸರೋವರಕ್ಕೆ ಹಿಂದೂಗಳು ಯಾತ್ರೆ ಕೈಗೊಳ್ಳುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂದು ಕಾರಣ ನೀಡಿ ಅನುಮತಿ ನಿರಾಕರಿಸಲಾಗಿತ್ತು. ಆದರೆ ಅದೇ ಕೌಸರ್ ನಾಗ್ ಸರೋವರದ ಪರಿಸರದಲ್ಲೇ ಇರುವ ಪೀರ್ ಪಂಜಾಲ್ ಎಂಬ ಪ್ರದೇಶದಲ್ಲಿ ಇದ್ದಕ್ಕಿದ ಹಾಗೆ ರತೋರಾತ್ರಿ ಮಸೀದಿಯೊಂದು ನಿರ್ಮಾಣವಾಗತೊಡಗಿದೆ.
ಯಾತ್ರೆ ಕೈಗೊಳ್ಳಲು ಕಾಶ್ಮೀರಿ ಪಂಡಿತರಿಗೆ ಅನುಮತಿ ನಿರಾಕರಿಸಿದ್ದ ಜಮ್ಮು-ಕಾಶ್ಮೀರ ಸರ್ಕಾರ, ಅದೇ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾಗಿದ್ದರೂ ಮೌನ ವಹಿಸಿದೆ. ಯಾತ್ರೆಗೆ ನಿರ್ಬಂಧ ಹೇರಿ ಕಾಶ್ಮೀರಿ ಪಂಡಿತರ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದ್ದ ಓಮರ್ ಅಬ್ದುಲ್ಲಾ ಸರ್ಕಾರ, ಹಿಂದೂಗಳ ಪರಮಶ್ರದ್ಧಾ ಕೇಂದ್ರದಲ್ಲೇ ಮಸೀದಿ ನಿರ್ಮಾಣವಾಗಿರುವುದನ್ನು ಮೌನವಾಗಿದ್ದುಕೊಂಡೇ ಸಮರ್ಥಿಸಿಕೊಳ್ಳುತ್ತಿರುವುದು ಸ್ಥಳೀಯ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ಜುಲೈ30ರಿಂದ ಆಗಸ್ಟ್ 3ವರೆಗೂ ಕಾಶ್ಮೀರ ಕಣಿವೆಯಲ್ಲಿ ನಡೆಯಬೇಕಿದ್ದ ಕೌಸರ್ ನಾಗ್ ಧಾರ್ಮಿಕ ಯಾತ್ರೆಗೆ ನೀಡಿದ್ದ ಅನುಮತಿಯನ್ನು ಜಮ್ಮು-ಕಾಶ್ಮೀರ ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಆಕ್ಷೇಪಿಸಿದ್ದ ಅಮೆರಿಕದಲ್ಲಿನ ಕಾಶ್ಮೀರಿ ಪಂಡಿತರು, ಯಾತ್ರೆಗೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗಷ್ಟೆ ಆಗ್ರಹಿಸಿದ್ದರು.
ಕೌಸರ್ ನಾಗ್ ಪ್ರದೇಶದಲ್ಲಿ ಮಸೀದಿ ನಿರ್ಮಿಸಲೆಂದೇ ಪಂಡಿತರಿಗೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ನಿರಾಶ್ರಿತ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿ ಅವರ ಏಳಿಗೆಗಾಗಿ ದುಡಿಯುತ್ತೇನೆ ಎಂದು ಮೋದಿ ಭರವಸೆ ನೀಡಿದ ಬಳಿಕವೂ ಜಮ್ಮು-ಕಾಶ್ಮೀರದಲ್ಲಿ, ಪಂಡಿತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡಲಾಗುತ್ತಿದೆ.