ಜಮ್ಮು-ಕಾಶ್ಮೀರ : ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಅರ್ನಿಯಾ, ಆರ್.ಎಸ್.ಪುರಗಳಲ್ಲಿ ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿದ್ದು, ಉದ್ವಿಗ್ನ ವಾತಾವರಣ ಉಂಟಾಗಿದೆ.
ಅರ್ನಿಯಾ, ಆರ್.ಎಸ್.ಪುರಗಳಲ್ಲಿ 25 ಸೇನಾ ನೆಲೆಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಈ ಭಾಗದಲ್ಲಿನ ನಾಗರಿಕರು ಭಯಭೀತರಾಗಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಪಾಕ್ ಸೇನೆಯ ದಾಳಿಯ ಭೀತಿಯಿಂದ ಓರ್ವ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಭಾರತೀಯ ಸೇನೆ ಹೆಚ್ಚುವರಿ ಪಡೆಗಳನ್ನು ಗಡಿಯತ್ತ ರವಾನಿಸಿದೆ. ಹಿರಿಯ ಸೇನಾಧಿಕಾರಿಗಳು ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಯೋಧರಿಗೆ ಧೈರ್ಯತುಂಬುತ್ತಿದ್ದಾರೆ. ಈ ನಡುವೆ ಆ.23ರಂದು ಸಂಜೆ ಪೂಂಛ್ ವ್ಯಾಪ್ತಿಯಲ್ಲಿ ಪಾಕ್ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದೆ. ಬಿ.ಎಸ್.ಎಫ್ ನ ಮೂರು ಚೆಕ್ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಗಡಿ ಪ್ರದೇಶದ ಅರ್ನಿಯಾ, ಆರ್.ಎಸ್.ಪುರ ಸೆಕ್ಟರ್ ನಲ್ಲಿರುವ ಬಿ.ಎಸ್.ಎಫ್ ಚೆಕ್ ಪೋಸ್ಟ್ ಗಳು ಹಾಗೂ ಹಳ್ಳಿಗಳೇ ಪಾಕ್ ಸೇನೆಯ ಗುರಿಗಳಾಗಿದ್ದು, ಮಷಿನ್ ಗನ್ ಹಾಗೂ ಮಾರ್ಟರ್ ಗಳಿಂದ ಈ ದಾಳಿ ನಡೆಸಲಾಗಿದೆ.
ಈ ನಡುವೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಾಕ್ ಗೆ ತಕ್ಕ ಉತ್ತರ ನೀಡುವಂತೆ ಹೇಳಿರುವ ರಾಜನಾಥ್ ಸಿಂಗ್, ಬಿ.ಎಸ್.ಎಫ್ ಯೋಧರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನ, ಭಾರತದ ಗಡಿಯಲ್ಲಿ 70ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.