ನವದೆಹಲಿ : ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, 1993ರಿಂದ ಈ ವರೆಗಿನ ಎಲ್ಲಾ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ.ಆರ್.ಎಂ.ಲೋಧಾ ನೇತೃತ್ವದ ತ್ರಿಸದಸ್ಯ ಪೀಠ, 1993ರಿಂದ 2010ರವೆಗೆ ಎಲ್ಲಾ ಕಲ್ಲಿದ್ದಲು ನಿಕ್ಷೇಪಗಳನ್ನು ಕಾನೂನು ಬಹಿರವಾಗಿ ಹಂಚಲಾಗಿದೆ ಎಂದು ತಿಳಿಸಿದೆ.
ಕಲ್ಲಿದ್ದಲು ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಕಾನೂನು ಉಲ್ಲಂಘನೆಯಾಗಿದೆ. ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ಪಾರದರ್ಶಕತೆ ಕಂಡುಬಂದಿಲ್ಲ, ಸದಸ್ಯರು ಕೂಡ ಯಾವುದೇ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ 1993ರ ನಂತರದ ಎಲ್ಲಾ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ತೀರ್ಪು ಪ್ರಕಟಿಸಬೇಕಾದರೆ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯ ಎಂದಿರುವ ನ್ಯಾಯಾಲಯ ಹಗರಣ ಸಂಬಂಧದ ತೀರ್ಪನ್ನು ಆ.28ಕ್ಕೆ ಕಾಯ್ದಿರಿಸಿದೆ. ಪುನರ್ ಹಂಚಿಕೆಗೆ ಸಂಬಂಧಿಸಿದ ವಿಚಾರಣೆ ಸೆ.1ರಿಂದ ವಿಚಾರಣೆ ನಡೆಯಲಿದೆ.
ಯುಪಿಎ ಸರ್ಕಾದ ಅಧಿಕಾರದ ಅವಧಿಯಲ್ಲಿ 194 ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾಗಿತ್ತು. 1993-2005ರವರೆಗೆ 70 ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಲಾಗಿತ್ತು. 2006ರಲ್ಲಿ 53, 2007ರಲ್ಲಿ 52, 2008ರಲ್ಲಿ 24, 2009ರಲ್ಲಿ 16 ಹಾಗೂ 2010ರಲ್ಲಿ 1 ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಲಾಗಿತ್ತು.