ನವದೆಹಲಿ : ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಒಂದುವೇಳೆ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಣೆಯಾದರೆ ಭಾರತ ಸಂಕಷ್ಟಕ್ಕೀಡಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು ಎಂಬ ಒತ್ತಾಯಗಳಿ ಕೇಳಿ ಬರುತ್ತಿರುವ ನಡುವೆ ಒಂದು ವೇಳೆ ಯುದ್ಧ ಘೋಷಣೆಯಾದರೆ ಭಾರತದ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸ್ತ್ರಗಳಿಲ್ಲ. ಯುದ್ಧ ಘೋಷಣೆಯಾದರೆ ಭಾರತದ ಅಸ್ತ್ರಗಳು ಕೇವಲ 20 ದಿನಗಳಲ್ಲಿ ಬರಿದಾಗಲಿದೆ ಎಂಬ ಆತಂಕಕಾರಿ ವಿಚಾರವನ್ನು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಸೇನಾಪಡೆಗಳಿಗೆ ಶಸ್ತ್ರಾಸ್ತ್ರ ಕೊರತೆಯಿರುವುದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಲು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಕಳೆದ 6ತಿಂಗಳಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ.
ದೇಶದ 39 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳು ಉತ್ಪಾದನೆ ಪ್ರಮಾಣ ಇಳಿಮುಖಗೊಳಿಸಿದ ಫಲವಾಗಿ ಭಾರತಕ್ಕೆ ಈ ಸ್ಥಿತಿ ಎದುರಾಗಿದೆ. ಮಷಿನ್ ಗನ್, ಗುಂಡು, ಗ್ರೆನೇಡ್, ಮೈನ್ ಫ್ಯೂಸ್, ವಾಯು ಪ್ರತಿರೋಧಕ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ಕೊರತೆಯಿದೆ.
ತೀವ್ರ ಹಣಾಹಣಿಯುಳ್ಳ ಯುದ್ಧಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ದಾಸ್ತಾನಿಟ್ಟುಕೊಳ್ಳಲು 2019ರವರೆಗೂ ಕಾಯಬೇಕಾಗುತ್ತದೆ. ಇದಕ್ಕೆ 97 ಸಾವಿರ ಕೋಟಿ ರೂ ಹಣ ಬೇಕಾಗುತ್ತದೆ ಎಂದು ಸೇನೆಯ ಮಾರ್ಗದರ್ಶಿ ಸೂತ್ರ ಹೇಳುತ್ತದೆ.
39 ಸಾವಿರ ಅಧಿಕಾರಿಗಳು ಹಾಗೂ 11.3 ಲಕ್ಷದಷ್ಟು ಯೋಧರನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಸೇನಾಪಡೆ ಭಾರತದ್ದಾಗಿದ್ದರೂ ಶಸ್ತ್ರಾಸ್ತ್ರ ಕೊರತೆ ಎದುರಾಗಿರುವುದು ಆತಂಕಕ್ಕೆ ಕಾರಣವಾಗಿದೆ.
1999ರಲ್ಲಿ ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಅಂದಿನ ಕೇಂದ್ರ ಸರ್ಕಾರ ಇಸ್ರೇಲ್ ನಿಂದ ಸ್ಫೋಟಕಗಳನ್ನು ಖರೀದಿಮಾಡಿತ್ತು.