ನವದೆಹಲಿ : ಗುಜರಾತ್ ನ ವಿಧಾನಸಭಾಧ್ಯಕ್ಷ ವಾಜುಭಾಯ್ ರೂಡಭಾಯ್ ವಾಲ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಿ ರಾಷ್ಟ್ರಪತಿ ಭವನ ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ರಾಜಸ್ಥಾನ ರಾಜ್ಯಗಳಿಗೆ ನೂತನ ರಾಜ್ಯಪಾಲರ ಪಟ್ಟಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದಾರೆ. ಮಾರ್ಗರೇಟ್ ಆಳ್ವ ಅವರಿಂದ ತೆರವುಗೊಂಡಿದ್ದ ರಾಜಸ್ಥಾನ ರಾಜ್ಯಪಾಲ ಸ್ಥಾನಕ್ಕೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಮಾಜಿ ಕೇಂದ್ರ ಸಚಿವ ಚೌದರಿ ವಿದ್ಯಾಸಾಗರ್ ರಾವ್ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿ, ಬಿಜೆಪಿ ಮಹಿಳಾ ಮೋರ್ಚ ಘಟಕದ ಮುಖಂಡರಾದ ಮೃದುಲಾ ಸಿನ್ಹಾ ಅವರು ಗೋವಾ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ರಾಜ್ಯಪಾಲರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು.
ಹಂಸರಾಜ ಭಾರಧ್ವಾಜ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಪಾಲ ರೋಸಯ್ಯ ಅವರು ತಾತ್ಕಾಲಿಕವಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.