ನವದೆಹಲಿ : 'ಉತ್ತರ ಪ್ರದೇಶ'ದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಮುಸ್ಲಿಂ ಯುವಕರು ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯರೊಂದಿಗೆ ಪ್ರೀತಿ ನಾಟಕವಾಡಿ ಮೋಸ ಮಾಡುವುದನ್ನು ಬಿಡದೇ ಇದ್ದಲ್ಲಿ ಅವರ ಭಾಷೆಯಲ್ಲೇ ಉತ್ತರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಂಡಿಯಾ ಟಿ.ವಿಯಲ್ಲಿ ಪ್ರಸಾರವಾದ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಹಾಗೂ ಬಲವಂತದ ಮತಾಂತರ ನಡೆಸುತ್ತಿರುವವರಿಗೆ ಯಾವ ಭಾಷೆ ಅರ್ಥವಾಗಲಿದೆಯೋ ಅದೇ ಭಾಷೆಯಲ್ಲಿ ಉತ್ತರಿಸುತ್ತೇವೆ ಎಂದಿದ್ದಾರೆ.
ಹಿಂದೂಗಳು ಸರ್ವಧರ್ಮ ಸಹಿಷ್ಣುಗಳು, ಶಾಂತಿಪ್ರಿಯರು, ಆದರೆ ತಮ್ಮ ಶಾಂತಿ ಹಾಗೂ ಧರ್ಮಕ್ಕೆ ಚ್ಯುತಿ ಬಂದಲ್ಲಿ ಧರ್ಮ ವಿರೋಧಿಗಳ ಮೇಲೆ ಬಲಪ್ರಯೋಗಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ನಾವು ದೇಶದ ಸಂವಿಧಾನವನ್ನು ಗೌರವಿಸುತ್ತೇವೆ,ಆದರೆ ಹಿಂದೂಗಳಿಗೆ ಅನ್ಯಾಯವಾಗುತ್ತಿದ್ದರೂ ಕಾನೂನು ಸುಮ್ಮನಿದ್ದರೆ, ಆತ್ಮ ರಕ್ಷಣೆಗಾಗಿ ಶತೃಗಳ ವಿರುದ್ಧ ಬಲಪ್ರಯೋಗ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.
ಮುಸ್ಲಿಮರು ಶಾಂತಿಯಿಂದ ಇದ್ದರೆ ನಾವೂ ಶಾಂತಿಯಿಂದ ಇರುತ್ತೇವೆ, ಮುಸ್ಲಿಮರು ಅಭಿವೃದ್ಧಿ ಪರವಿದ್ದರೆ ನಾವು ಸಹಕರಿಸುತ್ತೇವೆ ಆದರೆ ಅವರು ಶಾಂತಿ ಕದಡಿದರೆ, ಅವರಿಗೆ ಅರ್ಥವಾಗುವ ರೀತಿಯಲ್ಲೇ ಉತ್ತರಿಸಿ ಮುಸ್ಲಿಮರಿಗೂ ಶಾಂತಿಯಿಂದ ಇರುವುದನ್ನು ಬಲವಂತವಾಗಿ ಕಲಿಸುತ್ತೇವೆ ಎಂದು ಆದಿತ್ಯನಾಥ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು, ಯಾರಿಗೂ ಅನ್ಯಾಯವಾಗಬಾರದು, ಭಯೋತ್ಪಾದನೆಗೆ ಧರ್ಮ, ಮತಗಳ ಬೇಧವಿಲ್ಲ, ಆದರೆ ಮುಸಲ್ಮಾನರು ಐ.ಎಸ್.ಐ.ಎಸ್ ನಲ್ಲಿ ಉಗ್ರ ಸಂಘಟನೆ ಸೇರಿ ಮಡಿದರೆ ಫತೇಹ್(ಸಂತಾಪ ಪ್ರಾರ್ಥನೆ) ನಡೆಸಲಾಗುತ್ತದೆ. ರಾಮ ಜನ್ಮಭೂಮಿಯ ಮೇಲೆ ಆಕ್ರಮಣ ನಡೆಸಿ ಭದ್ರತಾ ಪಡೆಗಳಿಂದ ಗುಂಡಿಕ್ಕಿಸಿಕೊಂಡ ಸತ್ತವರ ಸ್ಮರಣಾರ್ಥವಾಗಿ ಫತೇಹ್ ಗಳನ್ನು ನಡೆಸಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇಲ್ಲವೆಂಬುದಾದರೆ ಉಗ್ರರು ಹತರಾದಾಗ ಫತೇಹ್ ನಡೆಸುವ ಬದಲು ಅಮೆರಿಕಾ ಒಸಾಮಾ ಬಿನ್ ಲ್ಯಾಡನ್ ಶವವನ್ನು ಸಮುದ್ರಕ್ಕೆ ಎಸೆದಂತೆ ಇಲ್ಲಿಯೂ ಉಗ್ರರ ಶವವನ್ನು ಸುಟ್ಟು ಭಸ್ಮ ಮಾಡಬೇಕು ಎಂದು ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಯುವತಿಯರನ್ನು ಮುಸ್ಲಿಮರು ನಿಜವಾದ ಪ್ರೀತಿಯಿಂದ ಮದುವೆಯಾಗುತ್ತಿಲ್ಲ. ಅವರು ನಡೆಸುತ್ತಿರುವ ಪ್ರೀತಿ ನಾಟಕವಿದೆ. ಲವ್ ಹೆಸರಿನಲ್ಲಿ ಜಿಹಾದ್ ನಡೆಸುತ್ತಿದ್ದಾರೆ. ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಮದುವೆಯಾಗಿ ಆ ನಂತರ ಬಿಟ್ಟು ಅವರ ಜೀವನವನ್ನು ಹಾಳು ಮಾಡುವುದೇ ಅವರ ಗುರಿ. ಅದೇ ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ ಅದು ಲವ್ ಜಿಹಾದ್ ಆಗಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಪತ್ನಿಯರಿಗೆ ಭದ್ರತೆ ಇದೆ. ಆದರೆ ಮುಸ್ಲಿಂ ಧರ್ಮದಲ್ಲಿ ಹಿಂದೂ ಯುವತಿಯರಿಗೆ ಭದ್ರತೆ ಇಲ್ಲ. ಆದ್ದರಿಂದಲೇ ತಾವು ಒಬ್ಬ ಹಿಂದೂ ಯುವತಿ ಲವ್ ಜಿಹಾದ್ ಗೆ ಬಲಿಯಾದರೆ 100 ಮುಸ್ಲಿಂ ಯುವತಿಯರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕೆಂಬ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೇ ಭಾರತದಲ್ಲಿರುವವರೆಲ್ಲರೂ ಹಿಂದೂಗಳಾಗಿದ್ದು, ಭಾರತದ ಮುಸ್ಲಿಂ ಯುವತಿಯರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದರೆ ಅದು ಮತಾಂತರವಾಗಲು ಸಾಧ್ಯವಿಲ್ಲ. ಮುಸ್ಲಿಂ ಯುವತಿಯರು ಹಿಂದೂ ಧರ್ಮಕ್ಕೆ ಮರಳುವು ರಾಷ್ಟ್ರೀಯತೆಯೊಂದಿಗೆ ಜೋಡಿಸುವ ಕೆಲಸವಾಗಿರುವುದರಿಂದ ಅದು ಪರಿವರ್ತನೆ(ಪರಾವರ್ತನ್) ಎಂದು ಆದಿತ್ಯನಾಥ್ ಹೇಳಿದ್ದಾರೆ. ಹಿಂದೂಗಳೆಂದು ಭಯೋತ್ಪಾದಕಾಗಲು ಸಾಧ್ಯವಿಲ್ಲ, ಮುಸ್ಲಿಮರೂ ಸಹ ಭಯೋತ್ಪಾದನೆ ಬಿಟ್ಟು ಅಭಿವೃದ್ಧಿ ಮಾರ್ಗದಲ್ಲಿ ನಡೆಯಬೇಕು ಇಲ್ಲದೇ ಇದ್ದರೆ ಅವರಿಗೆ ಶಾಂತಿ ಕಲಿಸುವ ವಿಧಾನ ತಮಗೆ ತಿಳಿದಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.