ಇಸ್ಲಾಮಾಬಾದ್ : 'ಪಾಕಿಸ್ತಾನ'ದಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಿಸಿದ್ದು ಸೆ.1ರಂದೂ ಪಾಕ್ ಸಂಸತ್ ಭವನದ ಎದುರು ಆಡಳಿತ ವಿರೋಧಿ ಪ್ರತಿಭಟನೆ ಮುಂದುವರೆದಿದೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಒತ್ತಾಯಿಸಿ ಅಲ್ಲಿನ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹಾಗೂ ಧರ್ಮ ಗುರು ತಾಹಿರ್ ಉಲ್ ಖಾದ್ರಿ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸಂಸತ್ ಭವನಕ್ಕೆ ನುಗ್ಗಲು ಯತ್ನಿಸುತ್ತಿರುವ ಪ್ರತಿಭಟನಾ ನಿರತರನ್ನು ತಡೆಯಲು ಭದ್ರತಾ ಪಡೆ ಹರಸಾಹಸ ಪಡುತ್ತಿದೆ.
ಪ್ರತಿಭಟನೆ ವೇಳೆ, ಸಂಸತ್ ಭವನಕ್ಕೆ ಪ್ರವೇಶಿಸದಂತೆ ತಡೆದಿರುವ ಭದ್ರತಾ ಪಡೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುವ ಹಂತ ತಲುಪಿದ ಹಿನ್ನೆಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಅಶ್ರುವಾಯುವನ್ನೂ ಪ್ರಯೋಗಿಸಿದ್ದಾರೆ.
ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಅರಾಜಕತೆ ಹೆಚ್ಚಾಗುತ್ತಿದ್ದು, ಇಮ್ರಾನ್ ಖಾನ್ ಬೆಂಬಲಿಗರು ನವಾಜ್ ಷರೀಫ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ವರದಿ ಪ್ರಕಾರ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪ್ರತಿಭಟನಾ ನಿರತರೊಂದಿಗೆ ಸಂಧಾನ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.