ನವದೆಹಲಿ : ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಆದೇಶ ನೀಡಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಪುರುಷತ್ವ ಪರೀಕ್ಷೆ ನಡೆಸುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿತ್ಯಾನಂದ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೆ.3ರಂದು ವಿಚಾರಣೆ ನಡೆಸಿರುವ ಕೋರ್ಟ್, ನಿತ್ಯಾನಂದ ಪರ ವಕೀಲರು ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ್ದು ರಾಜ್ಯ ಹೈಕೋರ್ಟ್ ತೀರ್ಮಾನವನ್ನು ಎತ್ತಿ ಹಿಡಿದಿದೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಪುರುಷತ್ವ ಪರೀಕ್ಷೆ ನಡೆಸುವಂತೆ ಆದೇಶಿಸಿದ ರಾಮನಗರ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಡದಿಯ ನಿತ್ಯಾನಂದ ಸ್ವಾಮೀಜಿ ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದ ನಿತ್ಯಾನಂದ ಸ್ವಾಮೀಜಿ ಪರ ವಕೀಲರಾದ ಸಿ.ವಿ ನಾಗೇಶ್ ಅವರು, ಜೆ.ಎಂ.ಎಎಫ್.ಸಿ ನ್ಯಾಯಾಲಯದ ಆದೇಶ ರದ್ದು ಮಾಡುವಂತೆ ಕೋರಿದ್ದರು. ಆದರೆ, ತಡೆಯಾಜ್ಞೆ ಮಾತ್ರ ಸಿಕ್ಕಿತ್ತು. ನಂತರ ಪುರುಷತ್ವ ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ ಸಲ್ಲಿಸಲಾಗಿತ್ತು. ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆ ನಡೆಸಲೇ ಬೇಕೆಂದು ಕೋರ್ಟ್ ಅದೇಶ ನೀಡಿದೆ. ಈ ಆದೇಶದಿಂದ ನಿತ್ಯಾನಂದನಿಗೆ ತೀವ್ರ ಹಿನ್ನಡೆಯುಂಟಾಗಿದೆ. ರಾಮನಗರ ಪೊಲೀಸರು ನಿತ್ಯಾನಂದನನ್ನು ವಶಕ್ಕೆ ಪಡೆದು ಪುರುಷತ್ವ ಪರೀಕ್ಷೆ ನಡೆಸಲಿದ್ದಾರೆ.
ಇದೇ ವೇಳೆ ನಿತ್ಯಾನಂದ ತಲೆ ಮರೆಸಿಕೊಳ್ಳಲು ಸಹಕರಿಸಿದ್ದ ಆರೋಪ ಎದುರಿಸುತ್ತಿದ್ದ ಪ್ರಕರಣದ 2ನೇ ಆರೋಪಿ ಗೋಪಾಲ ರೆಡ್ಡಿ ವಿರುದ್ಧದ ಆರೋಪವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.