BW News Bureau : ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯ ಗೊಂದಲಗಳಿಗೆ ತೆರೆಬಿದ್ದಿದೆ. ಮೇಯರ್ ಆಗಿ ಶಾಂತಕುಮಾರಿ ಹಾಗೂ ಉಪಮೇಯರ್ ಆಗಿ ರಂಗಣ್ಣ ಆಯ್ಕೆಯಾಗಿದ್ದಾರೆ.
ಶಾಂತಕುಮಾರಿ ಮೂಡಲಪಾಳ್ಯ ಕಾರ್ಪೋರೇಟರ್ ಆಗಿದ್ದು, ರಂಗಣ್ಣ ಕಾಮಾಕ್ಷಿ ಪಾಳ್ಯ ಕಾರ್ಪೋರೇಟರ್ ಆಗಿದ್ದಾರೆ. ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೇಯರ್ ಸ್ಥಾನಕ್ಕೆ ನಂಜುಂಡಪ್ಪ, ರವೀಂದ್ರ ಹಾಗೂ ಶಾಂತಕುಮಾರಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಉಪ ಮೇಯರ್ ಸ್ಥಾನಕ್ಕಾಗಿ ಗೀತಾ ಹಾಗೂ ರಂಗಣ್ಣ ಹೆಸರು ಮುಂಚೂಣಿಯಲ್ಲಿತ್ತು.
ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಬೆಳಿಗ್ಗೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಲಾಲ್ ಬಾಗ್ ಬಳಿಯಿರುವ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ತೀವ್ರ ಚರ್ಚೆ ಬಳಿಕ ಶಾಂತಕುಮಾರಿಯವರನ್ನು ಮೇಯರ್ ಹಾಗೂ ರಂಗಣ್ಣ ಅವರನ್ನು ಉಪಮೇಯರ್ ಆಗಿ ಆಯ್ಕೆಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಂತಕುಮಾರಿ, ಬಿಬಿಎಂಪಿಯಲ್ಲಿ ಆರ್ಥಿಕ ಸಮಸ್ಯೆಯಿದೆ. ಸಂಪನ್ಮೂಲಗಳ ಕ್ರೋಢೀಕರಣವಾಗಬೇಕಿದೆ. ಕಸದ ಸಮಸ್ಯೆ ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇರುವ ಕೆಲ ಸಮಯದಲ್ಲಿಯೇ ಅಭಿವೃದ್ಧಿಯಾಗಬೇಕಿದೆ ಎಂದು ತಿಳಿಸಿದರು.
ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಚುನಾವಣೆ ಹಿನ್ನಲೆಯಲ್ಲಿ ಮೇಯರ್ ಸ್ಥಾನಕ್ಕೆ ಶಾಂತಕುಮಾರಿ ಹಾಗೂ ಉಪಮೇಯರ್ ಸ್ಥಾನಕ್ಕೆ ರಂಗಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತಾ ಅವರಿಗೆ ನಾಮಪತ್ರ ಸಲ್ಲಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಪರಿಶೀಲನೆ ನಡೆಯಲಿದೆ.
ಎರಡೂ ಸ್ಥಾನಗಳಿಗೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದಲ್ಲಿ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತದೆ.