ಬೆಂಗಳೂರು : 3 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ಆಗಿದ್ದು, ಷಟ್ಪಥದ ರಸ್ತೆ ಮತ್ತು ಸೇವಾ ರಸ್ತೆಯನ್ನು 123 ಕಿ.ಮೀ ಉದ್ದದವರೆಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಮಾರ್ಚ್ ತಿಂಗಳಲ್ಲೇ ಬೆಂಗಳೂರು-ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಮುಂದಿನ ವಾರದಿಂದ ಹೆದ್ದಾರಿ ನಿರ್ಮಾಣದ ಸರ್ವೆ ಕಾರ್ಯ ಆರಂಭವಾಗಲಿದೆ ಎಂದರು.
ಭೂ ಸ್ವಾಧೀನಕ್ಕೆ 1100 ಕೋಟಿ ರೂ ಅಗತ್ಯವಿದ್ದು, ರಸ್ತೆ ನಿರ್ಮಾಣಕ್ಕೆ 1600 ಕೋಟಿ ರೂ ವೆಚ್ಚವಾಗಲಿದೆ. ಇತರ ಕಾಮಗಾರಿಗಳಿಗಾಗಿ 300 ಕೋಟಿ ಅಗತ್ಯವಿದೆ ಎಂದು ಸಚಿವರು ವಿವರಿಸಿದರು.
ಬಿಡದಿ, ಶ್ರೀರಂಗ ಪಟ್ಟಣದಲ್ಲಿ ಮೇಲ್ಸೇತುವೆ, ಚೆನ್ನಪಟ್ಟಣ, ಮಂಡ್ಯದಲ್ಲಿ ಬೈಪಾಸ್ ರಸ್ತೆ, ಮದ್ದೂರಿನಲ್ಲಿ 500 ಮೀಟರ್ ಗೆ ಒಂದರಂತೆ ಕೆಳಸೇತುವೆ ನಿರ್ಮಿಸಿ ಪಾದಚಾರಿ, ಜಾನುವಾರುಗಳುಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.