BW News Bureau : ಬೆಂಗಳೂರಿನ ಬನ್ನೇರುಘಟ್ಟದ ಗೊಟ್ಟೆಗೆರೆಯಿಂದ ಮೀನಾಕ್ಷಿ ದೇವಾಲಯದವರೆಗಿನ ಸಂಚಾರ ದಟ್ಟಣೆ ತಗ್ಗಿಸಲು ಶೀಘ್ರವೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸುವಂತೆ ಬೃಹತ್ ರಸ್ತೆಗಳು ವಿಭಾಗದ ಅಧಿಕಾರಿಗಳಿಗೆ ಮೇಯರ್ ಶಾಂತಕುಮಾರಿ ಸೂಚನೆ ನೀಡಿದ್ದಾರೆ.
ಉಪಮೇಯರ್ ಕೆ.ರಂಗಣ್ಣ ಅವರೊಂದಿಗೆ ತಪಾಸಣೆ ಕೈಗೊಂಡ ಮೇಯರ್ ಕಾಮಗಾರಿ ಆರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ತಿಳಿಸಿದರು. ಮೇಯರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ನೂರಾರು ನಾಗರಿಕರು ವಾಹನ ಸವಾರರು ಈ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರದಟ್ಟಣೆ ಬಗ್ಗೆ ದೂರು ಸಲ್ಲಿಸಿದರು.
ಸ್ಥಳದಲ್ಲಿ ಉಪಸ್ಥಿತರಿದ್ದ ಕೃಷ್ಣಪ್ಪ ಅವರು ದನಿಗೂಡಿಸಿ ಈ ಭಾಗದ ಜನರು ರಸ್ತೆ ಅಗಲೀಕರಣಕ್ಕಾಗಿ ಸ್ಥಳ ಬಿಟ್ಟುಕೊಡಲು ಸಿದ್ಧರಿದ್ದಾರೆ ಅಧಿಕಾರಿಗಳು ಮುತುವರ್ಜಿ ವಹಿಸಿ ಟಿ.ಡಿ.ಆರ್ ನೀಡಲು ಮುಂದಾಗಬೇಕು ಎಂದರು.
ಜನರೇ ಖುದ್ದು ಸ್ಥಳ ಬಿಟ್ಟುಕೊಡಲು ಸಿದ್ಧರಿದ್ದಾರೆ ಎಂದರೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಅಡ್ಡಿ ಇಲ್ಲ. ಕೂಡಲೇ ಟಿಡಿಆರ್ ಸೇರಿದಂತೆ ಪರಿಹಾರ ನೀಡುವ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮೇಯರ್ ಸೂಚನೆ ನೀಡಿದರು.