ಚೆನ್ನೈ : 'ತಮಿಳು ನಾಡು' ಮುಖ್ಯಮಂತ್ರಿ ಜಯಲಲಿತಾ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರಿಗೆ ತಮಿಳು ನಾಡು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣದ ಹಿನ್ನೆಲೆಯಲ್ಲಿ ಅ.30ರಂದು ಕೋರ್ಟ್ ಗೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಶ್ರೀಲಂಕಾದಿಂದ ತಮಿಳು ನಾಡಿನ ಮೀನುಗಾರರ ಬಂಧನದ ಬಗ್ಗೆ ಹೇಳಿಕೆ ನೀಡಿದ್ದರಿಂದ ಸುಬ್ರಹ್ಮಣ್ಯಂ ಸ್ವಾಮಿ ಅವರ ವಿರುದ್ಧ ಜಯಲಲಿತಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೇಳಿಕೆಯನ್ನು ವರದಿ ಮಾಡಿದ್ದ ತಮಿಳು ದೈನಿಕ ದಿನಮಲಾರ್ ಮತ್ತು ಇಂಗ್ಲಿಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ವಿರುದ್ಧವೂ ಜಯಲಲಿತಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ ಸೆಶನ್ಸ್ ನ್ಯಾಯಾಧೀಶ ಆದಿನಾಥನ್ ಅವರು ಈ ಎರಡೂ ದೈನಿಕಗಳಿಗೆ ಕೂಡ ಸಮನ್ಸ್ ಜಾರಿ ಮಾಡಿದ್ದಾರೆ.
ತಮಿಳು ನಾಡಿನ ಮೀನುಗಾರರು ಶ್ರೀಮಂತರಾಗಿದ್ದು ಸಾಗರ ಸಂಪನ್ಮೂಲಗಳನ್ನು ಹಾನಿಮಾಡಲು ಯತ್ನಿಸುತ್ತಿರುವುದರಿಂದ ಶ್ರೀಲಂಕಾ ಸರ್ಕಾರ, ಬಂಧಿಸಿದ್ದ ಮೀನುಗಾರರ ದೋಣಿಗಳನ್ನು ವಾಪಸ್ ನೀಡಬಾರದೆಂದು ಲಂಕಾ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಸ್ವಾಮಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ