ನವದೆಹಲಿ : ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಲ್ಲಾ 4 ಸ್ಥಾನಗಳಲ್ಲೂ ಎಬಿವಿಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಸೆ.12ರಂದು ಜೆ.ಎನ್.ಯು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಲ್ಲಾ ವಿಭಾಗಗಳಲ್ಲೂ ಎಬಿವಿಪಿ ಅಭ್ಯರ್ಥಿಗಳು ಅತ್ಯಂತ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮೇಲೆ ಹಿಡಿತ ಸಾಧಿಸಿತ್ತು. ಈ ಬಾರಿ ನಾಲ್ಕೂ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎಬಿವಿಪಿ ವಿದ್ಯಾರ್ಥಿ ಘಟಕದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಂತಾಗಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಸ್ಥಾನಕ್ಕೆ ಮೊಹಮದ್ ಜಹಿದುಲ್ ದಿನಾವ್ ಎಂಬ ಪಿ.ಹೆಚ್.ಡಿ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಯನ್ನು ಎಬಿವಿಪಿ ಕಣಕ್ಕಿಳಿಸಿತ್ತು. ಇದೇ ಪ್ರಥಮ ಬಾರಿಗೆ ಎಬಿವಿಪಿಯಿಂದ ಜೆ.ಎನ್.ಯು ವಿಶ್ವವಿದ್ಯಾನಿಲಯಗದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬ ಆಯ್ಕೆಯಾಗಿದ್ದಾರೆ. ಈ ಹಿಂದೆ 1998-1999ಅಲ್ಲಿ ಎಬಿವಿಪಿಯಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಆದರೆ ಆ ಅಭ್ಯರ್ಥಿ ಪರಾಭವಗೊಂಡಿದ್ದರು.
'ಭಾರತದಲ್ಲಿ ಅಲ್ಪಸಂಖ್ಯಾತರೆಂಬ ಪರಿಕಲ್ಪನೆಯನ್ನು ತೆಗೆದುಹಾಕಬೇಕು' ಎಂದು ಚುನಾವಣೆಗೂ ಮುನ್ನ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಮೊಹಮದ್ ಜಹಿದುಲ್ ದಿನಾವ್ ಹೇಳಿದ್ದರು.