ಮೈಸೂರು : ನವರಾತ್ರಿ ಅಂಗವಾಗಿ ಸರ್ಕಾರ ನಡೆಸುತ್ತಿರುವ ಉತ್ಸವಕ್ಕೆ ದಸರಾ ಎಂಬ ಪದ ಪ್ರಯೋಗ ಮಾಡುವುದನ್ನು ಮೈಸೂರು ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಸರಾ ಎಂಬುದು ಮೈಸೂರು ಮಹಾರಾಜರ ಖಾಸಗಿ ಸ್ವತ್ತು, ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ನಿಧನದ ಹಿನ್ನೆಲೆಯಲ್ಲಿ ಅರಮನೆ ಮುಂಭಾಗದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು ಎಂದು ಈ ಹಿಂದೆ ಮಹಾರಾಣಿ ತಾಕೀತು ಮಾಡಿದ್ದರು. ಇದೀಗ ಮೈಸೂರು ದಸರಾ ಎಂಬುದು ರಾಜವಂಶಕ್ಕೆ ಸೇರಿದ ಪದವಾಗಿದ್ದು, ಅರಮನೆಯಲ್ಲಿ ದಸರಾ ನಡೆಯುತ್ತಿಲ್ಲವಾದ ಕಾರಣ ರಾಜ್ಯ ಸರ್ಕಾರ ಈ ಬಾರಿಯ ನವರಾತ್ರಿ ಉತ್ಸವಕ್ಕೆ ನಾಡ ಹಬ್ಬ ಎಂಬ ಪದ ಉಪಯೋಗಿಸಲಿ ಎಂದು ಸರ್ಕಾರಕ್ಕೆ ಮಹಾರಾಣಿ ಸಲಹೆ ನೀಡಿದ್ದಾರೆ. ಈ ಮೂಲಕ ಸರ್ಕಾರ-ಅರಮನೆಯ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಭಣವಾಗಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರೊ.ನಂಜರಾಜ್ ಅರಸ್ ನಾಡ ಹಬ್ಬ ದಸರಾ ನಾಡಿಗೆ ಸಂಧಿಸಿದ್ದು, ಹಾಗಾಗಿ ದಸರಾ ಆಚರಣೆಗೆ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.