ನವದೆಹಲಿ : 'ಡೀಸೆಲ್ ಬೆಲೆ' ನಿಯಂತ್ರಣ ರದ್ದುಗೊಳಿಸಲು ಇದೇ ಸೂಕ್ತ ಸಮಯ ಎಂದು ಆರ್.ಬಿ.ಐ ಗವರ್ನರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದ್ದು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಲು ಉತ್ತಮ ಅವಕಾಶ ದೊರೆತಿದೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಈ ಅವಕಾಶವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬೇಕೆಂದು ಸಲಹೆಯನ್ನೂ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು.
ಬೆಲೆ ಇಳಿಕೆಯಿಂದಾಗಿ ಹಣದುಬ್ಬರ, ಹಾಗೂ ಸಬ್ಸಿಡಿ ಹೊರೆಯೂ ಇಳಿಕೆಯಾಗುತ್ತದೆ. ಕಚ್ಚಾತೈಲದ ಬೆಲೆ ಇಳಿಕೆ ಭಾರತದಂತಹ ಗ್ರಾಹಕ ದೇಶಗಳಿಗೆ ನೆರವಾಗುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಪ್ರತಿತಿಂಗಳಿಗೆ 50 ಪೈಸೆ ಬೆಲೆ ಏರಿಸುತ್ತಿದ್ದುದ್ದರಿಂದ ಡೀಸೆಲ್ ಮಾರಾಟದ ನಷ್ಟ ಲೀಟರ್ ಗೆ 8 ಪೈಸೆಯ ಮಟ್ಟಕ್ಕೆ ಇಳಿದಿದೆ. ಭಾರತೀಯ ಖರೀದಿದಾರರ ಮಾನದಂಡವಾಗಿರುವ ಬ್ರೆಂಟ್ ಕ್ರೂಡ್ ಜೂನ್ ನಿಂದ ಶೇ. 14ರಷ್ಟು ಕುಸಿದಿದ್ದು, 96.38 ಯು.ಎಸ್ ಡಾಲರ್ ಗೆ ಇಳಿದಿದೆ.