ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾನ್ ಅಲೋಪಥಿಕ್ ಹೆಲ್ತ್ ಮಿಷನ್ ಗೆ ಚಾಲನೆ ನೀಡಲು ತೀರ್ಮಾನಿಸಿದೆ. ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್ ಗೆ ಚಾಲನೆ ನೀಡುವ ಮೂಲಕ ಅಲೋಪತಿ ಪದ್ಧತಿಯ ಚಿಕಿತ್ಸೆಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ಮುಂದಾಗಿದೆ.
ರಾಷ್ಟ್ರಾದ್ಯಂತ ಆಯುಷ್ (ಆಯುರ್ವೇದ, ಯೋಗ, ನ್ಯಾಚರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ) ಆರೋಗ್ಯ ಸೇವೆಗಳನ್ನು ನೀಡುವುದು ಕೇಂದ್ರ ಸರ್ಕಾರದ ನಿರ್ಧಾರದ ಹಿಂದಿರುವ ಉದ್ದೇಶವಾಗಿದೆ. ಪ್ರಮುಖವಾಗಿ ದುರ್ಬಲ ಮತ್ತು ದೂರದ ಗುಡ್ಡಗಾಡಿನ ಪ್ರದೇಶಗಳಲ್ಲಿ ಈ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ.
ಭಾರತೀಯ ಪುರಾತನ ಚಿಕಿತ್ಸಾಪದ್ಧತಿ ಆಯುಷ್ ಬಗ್ಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚು ಜಾಗೃತಿ ಮೂಡಿಸುವಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಿಷನ್ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ. ಅಷ್ಟೇ ಅಲ್ಲದೇ ಅಲೋಪಥಿಕ್ ಚಿಕಿತ್ಸಾ ಪದ್ಧತಿಗೆ ಪರ್ಯಾಯವಾಗಿ ಆಯುಷ್ ಆಸ್ಪತ್ರೆಗಳ ಹಾಗೂ ಔಷಧಾಲಯಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಲಿದ್ದು ಆಯುಷ್ ಮಿಷನ್ ನಿಂದ ಚಿಕಿತ್ಸಾ ಪದ್ಧತಿಗೆ ಅಗತ್ಯವಿರುವ ಕಚ್ಚಾ ವಸ್ತುಗಳಿಗೂ ಬೇಡಿಕೆ ಹೆಚ್ಚಲಿದೆ.
ಭಾರತ ಸರ್ಕಾರ ಆಯುಷ್ ಮಿಷನ್ ಬಗ್ಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಬೇರೆ ಯಾವುದೇ ಚಿಕಿತ್ಸಾ ಪದ್ಧತಿ ಭಾರತದ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಯಾಗಿರುವ ಆಯುಷ್ ಚಿಕಿತ್ಸಾ ಪದ್ಧತಿಗೆ ಸಾಟಿಯಾಗುವುದಿಲ್ಲ ಎಂದು ಹೇಳಿದೆ. ಈ ಮೂಲಕ ನರೇಂದ್ರ ಮೊದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಅಲೋಪಥಿಕ್ ಚಿಕಿತ್ಸಾ ವಿಧಾನಕ್ಕೆ ಪರ್ಯಾಯವಾಗಿ ಸನಾತನ ಪದ್ಧತಿಯ ಚಿಕಿತ್ಸೆಯನ್ನು ಪ್ರೋತ್ಸಾಹಿಸಲು ಮುಂದಾಗಿದೆ.