BW News Bureau : ಸಧ್ಯಕ್ಕೆ ಮಹಾತ್ಮಾ ಗಾಂಧಿ ರಸ್ತೆ ವ್ಯಾಪ್ತಿಗಷ್ಟೇ ಸೀಮಿತವಾಗಿರುವ ವೈ-ಫೈ ಅಂತರ್ಜಾಲ ಸೌಲಭವನ್ನು ಬೆಂಗಳೂರು ನಗರಕ್ಕಿಡೀ ವಿಸ್ತರಿಸುವ ಬಗ್ಗೆ ಪರಿಶೀಲಿಸಿ ಕಾರ್ಯಗತ ಮಾಡಲಾಗುವುದು ಎಂದು ವಿಜ್ನಾನ ಮತ್ತು ತಂತ್ರಜ್ನಾನ ಸಚಿವ ಎಸ್.ಆರ್ ಪಾಟೀಲ್ ಹೇಳಿದ್ದಾರೆ.
ಕೆಪಿಸಿಸಿ ಐಟಿ ವಿಭಾಗದ ವತಿಯಿಂದ ಸೆ.17ರಂದು ಹಮ್ಮಿಕೊಂಡ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, 'ಬೆಂಗಳೂರು 10 ಲಕ್ಷಕ್ಕೂ ಮಿಕ್ಕಿ ನೇರ ಹಾಗೂ 30 ಲಕ್ಷಕ್ಕೂ ಮಿಕ್ಕಿ ಪರೋಕ್ಷ ಐಟಿ ಉದ್ಯೋಗಿಗಳನ್ನು ಹೊಂದಿದ್ದು, ಪ್ರಸ್ತುತ ವಾರ್ಷಿಕ 1.8ಲಕ್ಷ ಕೋಟಿ ರೂ. ವರಮಾನ ಕೇವಲ ಐಟಿ ಕ್ಷೇತ್ರದಿಂದ ಬರುತ್ತಿದೆ. 2020ರ ವೇಳೆಗೆ ಈ ಸಂಖ್ಯೆ ದ್ವಿಗುಣವಾಗಲಿದೆ. ಈಗಾಗಲೇ ಟ್ರಾಫಿಕ್, ನೀರು ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಾನಗರದ ದಟ್ಟಣೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಈ ಸಮಸ್ಯೆಗಳಿಗೆ ಉತ್ತರವೆಂದರೆ ದ್ವಿತೀಯ ಮತ್ತು ತೃತೀಯ ದರ್ಜೆಯ ನಗರ/ಪಟ್ಟಣಗಳಲ್ಲಿ ಐಟಿ ಕ್ಶೇತ್ರದಲ್ಲಿ ಬಂಡವಾಳ ಹೂಡಿಕೆದಾರರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು. ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿ, ಕಾರ್ಯಪ್ರವೃತ್ತವಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿಗೆ ಬರುವ ಬದಲಾಗಿ ತಮ್ಮ ತಮ್ಮ ಪಟ್ಟಣಗಳಲ್ಲೇ ಉದ್ಯೋಗ ಪಡೆಯುವಂತಾಗುತ್ತದೆ. ಮಾತ್ರವಲ್ಲ, ಉದ್ದಿಮೆದಾರರಿಗೆ ನಿರ್ವಹಣಾ ವೆಚ್ಚದಲ್ಲೂ ಸಾಕಷ್ಟು ಕಡಿತವಾಗಲಿದೆ' ಎಂದರು.
ಬೆಂಗಳೂರು ಭಾರತದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಹೆಸರು ಮಾಡಿದ ನಗರ. ಇದೊಂದು ಅಂತಾರಾಷ್ಟ್ರೀಯ ನಗರವಾಗಿದ್ದು, ಕೇವಲ ಐಟಿ ಕ್ಷೇತ್ರದಲ್ಲಷ್ಟೇ ಅಲ್ಲ, ಬಿಟಿ, ನ್ಯಾನೋ ಟೆಕ್ನಾಲಜಿಯಲ್ಲೂ ಬೆಂಗಳೂರು ಮಂಚೂಣಿಯಲ್ಲಿದೆ. ಐಟಿ ಉದ್ದಿಮೆಯಲ್ಲಂತೂ ಕರ್ನಾಟಕ ದೇಶಕ್ಕೇ ಮಾದರಿಯಾಗಿದೆ ಎಂದು ಪಾಟೀಲ್ ಹೇಳಿದರು.
ಇಲೆಕ್ಟ್ರಾನಿಕ್ ಹಾರ್ಡ್ ವೇರ್ ತಯಾರಿಕೆಯಲ್ಲೂ ಕರ್ನಾಟಕ ಮುಂದಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಂತೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂದಿನ ವರ್ಷಗಳಲ್ಲಿ ದೇಶ 400 ಬಿಲಿಯನ್ ಡಾಲರ್ ಮೊತ್ತದ ವ್ಯವಹಾರ ಗುರಿಯನ್ನು ಹೊಂದಿದ್ದು, ಇದರಲ್ಲಿ ಶೇ.10 ರಷ್ಟು ಪಾಲು ಕರ್ನಾಟಕದ್ದಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಐಟಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗುವ ಯುವಕರಿಗೆ ಎಲ್ಲಾ ರೀತಿಯ ಸಹಕಾರಗಳನ್ನು ಸರಕಾರದಿಂದ ಕೊಡಲಾಗುವುದು ಎಂದು ಸಚಿವರು ಭರವಸೆಯಿತ್ತರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಸದಸ್ಯ ವೀರಣ್ಣ ಮತ್ತಿಕಟ್ಟಿ ಎಸ್.ಆರ್.ಪಾಟೀಲರ ಕಾರ್ಯಕ್ಷಮತೆಯನ್ನು ಮೆಚ್ಚಿ ಕೊಂಡಾಡಿದರು. ಸಚಿವರಾಗಿ ನೇಮಕಗೊಂಡಾಗ ಐಟಿ/ಬಿಟಿ ಬಗ್ಗೆ ಹೆಚ್ಚೇನೂ ಗೊತ್ತಿರದಿದ್ದ ಪಾಟೀಲರು ಇಷ್ಟು ಕ್ಷಿಪ್ರ ಸಮಯದಲ್ಲೇ ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಐಟಿ ದಿಗ್ಗಜರ ಮೆಚ್ಚುಗೆ ಗಳಿಸಿರುವುದು ಹೆಮ್ಮೆಯ ವಿಚಾರ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಐಟಿ ವಿಭಾಗದ ಅಧ್ಯಕ್ಷ ಕೆ.ನಿರಂಜನ ರಾವ್ ಅವರು ಮಾತನಾಡಿ, ಎಸ್.ಆರ್ ಪಾಟೀಲರು ಐಟಿ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ ಸಚಿವರು. ತಮ್ಮ ಸರಳ ಸಜ್ಜನಿಕೆಯಿಂದ ಹಾಗೂ ಸಾಧನೆಗಳಿಂದ ಅವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿ ಸೆಲ್ ನ ಪದಾಧಿಕಾರಿ ಅವಿನಾಶ್ ಗಣ್ಯರಿಗೆ ಸನ್ಮಾನ ಮಾಡಿದರು.
ಸಂವಾದದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೆಪಿಸಿಸ್ ಐಟಿ ವಿಭಾಗದ ಪದಾದಿಕಾರಿಗಳು ಉಪಸ್ಥಿತರಿದ್ದರು ಹಾಗೂ ಸಚಿವರೊಂದಿಗೆ ನಡೆದ ಸಂವಾದದಲ್ಲಿ ಚರ್ಚೆ ನಡೆಸಿ ಹಲವಾರು ವಿಷಯಗಳ ಬಗ್ಗೆ ಸಲಹೆ / ವಿಚಾರ ವಿನಿಮಯ ಮಾಡಿಕೊಂಡರು.