ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶೀವಸೇನೆ ನಡುವಿನ ಸೀಟು ಹಂಚಿಕೆ ವಿವಾದ ಇತ್ಯರ್ಥಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.
ಉಭಯ ಬಣಗಳು ತಮ್ಮ ನಿಲುವಿನಲ್ಲಿ ಸಡಿಲಿಕೆ ಮಾಡಿಕೊಂಡು ಮೈತ್ರಿ ಮುಂದುವರೆಸುವ ಒಲವು ತೋರಿದ್ದಾರೆ. ಬಿಜೆಪಿ-ಶಿವಸೇನೆ ನಾಯಕರು ಈಗಾಗಲೇ ಸಭೆ ನಡೆಸಿದ್ದು, ಸೀಟು ಹಂಚಿಕೆ ಮಾತುಕತೆ ನಡೆಸಿದ್ದಾರೆ.
ತನ್ನ ಮಿತ್ರಪಕ್ಷಕ್ಕೆ 119 ಸೀಟು ಬಿಟ್ಟುಕೊಡುವುದಾಗಿ ಶೀವಸೇನೆ ನೀಡಿದ್ದ ಸೂತ್ರವನ್ನು ತಿರಸ್ಕರಿಸಿದ್ದ ಬಿಜೆಪಿ, ಶೀವಸೇನೆ ಮತ್ತು ತಾನು ಯಾವತ್ತೂ ಗೆಲ್ಲದ ಕೆಲ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಎಂಬುದರ ಬಗ್ಗೆ ಮರುವಿಮರ್ಶೆ ನಡೆಯಬೇಕು. ಈ ಬಗ್ಗೆ ಶೀವಸೇನೆ ಜತೆ ಚರ್ಚಿಸಲು ಸಿದ್ಧ ಎಂದು ಬಿಜೆಪಿ ಹೊಸ ಪ್ರಸ್ತಾಪ ಮುಂದಿಟ್ಟಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿಯ ಸುಧೀರ್ ಮುಂಗೆತ್ತಿವರ್, ಶಿವಸೇನೆ 59 ಸ್ಥಾನಗಳಲ್ಲಿ ಯಾವತ್ತೂ ಗೆದ್ದಿಲ್ಲ, ಬಿಜೆಪಿ 19 ಸ್ಥಾನಗಳಲ್ಲಿ ಯಾವತ್ತೂ ಗೆದ್ದಿಲ್ಲ, ಈ ಸ್ಥಾನಗಳ ಮರುಹೊಂದಾಣಿಕೆ ಬಗ್ಗೆ ಶಿವಸೇನೆ ಜತೆ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಶಿವಸೇನೆ ಮಾತುಕತೆಗೆ ಮುಂದಾಗಿದೆ. ಆದರೆ ಸಿಎಂ ಹುದ್ದೆ ಕುರಿತ ತನ್ನ ನಿಲುವನ್ನು ಇನ್ನೂ ಬದಲಿಸಿಲ್ಲ.
ಮೈತ್ರಿಕೂಟದಲ್ಲಿ ಶಿವಸೇನೆಯೇ ಹಿರಿಯಣ್ಣ, ನಮ್ಮವರೇ ಮುಖ್ಯಮಂತ್ರಿ ಆಗಲಿದ್ದಾರೆ. ಬಿಜೆಪಿ ಜನ್ಮ ತಳೆಯುವ ಮುನ್ನವೇ ನಮ್ಮ ಪಕ್ಷ ಅಸ್ತಿತ್ವದಲ್ಲಿತ್ತು. ಎಂದು ಪಕ್ಷದ ವಕ್ತಾರ ಸಂಜಯ್ ರಾವುತ್ ತಿಳಿಸಿದ್ದಾರೆ.