ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ಸೆ.22ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಅ.15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 119 ಸ್ಥಾನ ಬಿಟ್ಟುಕೊಡುವುದಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಕೊನೆ ಪ್ರಸ್ತಾಪ ಮುಂದಿಟ್ಟಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ರಾತ್ರಿ ನಡೆದ ಚುನಾವಣಾ ಸಮಿತಿ ಸಭೆ ಹಾಗೂ ಸಂಸದೀಯ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಶಿವಸೇನೆ ಜತೆ ಮೈತ್ರಿ ಕಡಿದುಕೊಂಡು 288 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧೆಗೆ ಮಹಾರಾಷ್ಟ್ರ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಶಾ ಅವರಲ್ಲಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಆದರೆ ಬಿಜೆಪಿಯಿಂದ ಯಾವುದೇ ನಿರ್ಣಯ ಬಾರದ ಹಿನ್ನಲೆಯಲ್ಲಿ ಕಾಯಲು ತೀರ್ಮಾನಿಸಿರುವ ಶಿವಸೇನೆ, ಒಂದು ವೇಳೆ ಮೈತ್ರಿ ಮುರಿಯುವ ಸಾಧ್ಯತೆಯಿರುವುದರಿಂದ ಅಭ್ಯರ್ಥಿಗಳನ್ನು ಗುರುತಿಸಲು ಮುಂದಾಗಿದೆ.
ಈ ನಡುವೆ ಬಿಜೆಪಿ-ಶಿವಸೇನೆಯ ಮಿತ್ರ ಪಕ್ಷಗಳು ಈ ಹಗ್ಗ ಜಗ್ಗಾಟದಿಂದ ಬೇಸರಗೊಂಡಿದ್ದು, ಸೆ.22ರೊಳಗೆ ಸೀಟು ಹಂಚಿಕೆ ಇತ್ಯರ್ಥಗೊಳಿಸಿಕೊಳ್ಳದಿದ್ದಲ್ಲಿ, ತಾವು ಮೈತ್ರಿಕೂಟ ತೊರೆಯುವುದಾಗಿ ಆರ್ ಎಸ್ ಪಿ ಅಧ್ಯಕ್ಷ ಮಹಾದೇವ್ ಜಾಣಕರ್ ಗಡುವು ನೀಡಿದ್ದಾರೆ.
ಈ ನಡುವೆ ಕಾಂಗ್ರೆಸ್-ಎನ್ ಸಿಪಿ ಸೀಟು ಹಂಚಿಕೆ ಬಿಕ್ಕಟ್ಟು ಕೂಡ ಮುಂದುವರೆದಿದ್ದು, ಸೆ.22ರಂದು ಎನ್ ಸಿಪಿ ಕೋರ್ ಕಮಿಟಿ ಸಭೆ ನಡೆಯಲಿದೆ. 144 ಸ್ಥಾನ ನೀಡುವಂತೆ ನಾವು ಇಟ್ಟಿರುವ ಬೇಡಿಕೆ ಅಬಾಧಿತ. ಕಾಂಗ್ರೆಸ್ ನ ಹೊಸ ಪ್ರಸ್ತಾಪವೂ ಬಂದಿದ್ದು, ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಪಕ್ಷದ ಮುಖಂಡ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.