ರಾಮನಗರ : ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ರಾಮನಗರದಲ್ಲಿ ಕಳೆದ 25 ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೆ.22ರಂದು ರಾಮನಗರದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ನಡೆಸಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಚಾರ್ಜ್ ಶೀಟ್ ಹಾಕಿದ್ದರೂ ಅವರಿಗೆ ಶಿಕ್ಷೆಯಾಗುವುದಿಲ್ಲ ಏಕೆಂದರೆ ಶಿವಕುಮಾರ್ ಅವರು ತಮಗೆ ಬೇಕಾದ ರೀತಿಯಲ್ಲಿ ಚಾರ್ಜ್ ಶೀಟ್ ನ್ನು ಬದಲಾಯಿಸುತ್ತಾರೆ. ಅಧಿಕಾರದ ಪ್ರಭಾವ ಬಳಸಿ ಡಿ.ಕೆ.ಶಿ ಎಂತಹ ದಾಖಲೆಗಳನ್ನು ಬೇಕಾದರೂ ತಿದ್ದುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ದಾಖಲೆಗಳನ್ನು ತಿರುಚುವುದರಿಂದಲೇ ಡಿ.ಕೆ.ಶಿ ಸಹೋದರರಿಗೆ ಶಿಕ್ಷೆಯಾಗುತ್ತಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ದಾಖಲೆಗಳನ್ನು ತಿರುಚುವವರಿಗೇ ಈಗ ಕಾಲವಿರುವುದೆಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹಸುಗಳ ಎಲುಬುಗಳಿಂದ ಡಾಲ್ಡಾ, ಪೌಡರ್ ಮತ್ತಿತರ ವಸ್ತುಗಳ ತಯಾರಿಕೆ ಮಾಡುತ್ತಿದ್ದಾರೆನ್ನಲಾದ ಅಕ್ರಮ ಅಡ್ಡೆಗಳ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿಸಿರುವುದನ್ನು ಇದೇ ವೇಳೆ ಕುಮಾರಸ್ವಾಮಿ ಖಂಡಿಸಿದ್ದಾರೆ.