ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ದೊರೆತಿದೆ. ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಬೆಳಿಗ್ಗೆ 8.37ರಿಂದ 9.05ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಅಗ್ರಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಸಂಭ್ರಮ ವಿದ್ಯುಕ್ತವಾಗಿ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಸಚಿವರುಗಳಾದ ಮಹದೇವ್ ಪ್ರಸಾದ್, ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಾಹಿತಿ ಕಾರ್ನಾಡ್, ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದರು. ನಾನೂ ಸಹ ದೇವಿಯ ಕ್ಷೇತ್ರವೊಂದರಲ್ಲಿ ಹುಟ್ಟಿದವನು. ಶಿರಸಿಯ ಮಾರಿಕಾಂಬಾ ಕ್ಷೇತ್ರದಲ್ಲಿ ಹುಟ್ಟಿದವನು ಎಂದು ತಿಳಿಸಿದರು.
1926ರಲ್ಲಿ ನಾಡಹಬ್ಬ ಎಂಬ ಪದ ಹುಟ್ಟಿಕೊಂಡಿತು. ನಾಡಹಬ್ಬ ಹುಟ್ಟಿದ್ದು ಧಾರವಾಡದಲ್ಲಿ, ಮೈಸೂರಿನಲ್ಲಲ್ಲ. ಕ್ರಮೇಣವಾಗಿ ನವರಾತ್ರಿ ಆಚರಣೆಗೆ ನಾಡಹಬ್ಬ ಎಂಬ ಹೆಸರು ಬಂತು ಎಂದು ವಿವರಿಸಿದರು.
ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗಿರೀಶ್ ಕಾರ್ನಾಡ್ ರಿಂದ ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ, ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು.