ಮುಂಬೈ : ಮಹಾರಾಷ್ಟ್ರದಲ್ಲಿ ಕಳೆದ 25ವರ್ಷಗಳಿಂದ ಅಭಾದಿತವಾಗಿ ಮುಂದುವರೆದುಕೊಂಡು ಬಂದಿದ್ದ ಬಿಜೆಪಿ-ಶಿವಸೇನೆ ಮೈತ್ರಿ ಬಹುತೇಕ ಅಂತ್ಯವಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ಕ್ಷಣಗಳವರೆಗೂ ನಡೆದ ಉಭಯ ಪಕ್ಷಗಳ ನಡುವಿನ ಮಾತುಕತೆ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮುರಿದು ಬಿದ್ದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ ಶೀಘ್ರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.
ಆರಂಭದಲ್ಲಿ ಬಿಜೆಪಿ 135 ಸ್ಥಾನಕ್ಕೆ ಬೇಡಿಕೆಯಿಟ್ಟಿತ್ತಾದರೂ ಅಂತಿಮವಾಗಿ 131 ಸ್ಥಾನ ಬಿಟ್ಟುಕೊಡುವಂತೆ ಕೇಳಿತ್ತು. ಆದರೆ ಶಿವಸೇನೆ 130 ಸೀಟುಗಳ ಆಫರ್ ನೀಡಿತ್ತು. ಇದಕ್ಕೊಪ್ಪದ ಬಿಜೆಪಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಶಿವಸೇನೆ 150ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗೆ ಮುಂದಾಗಿವೆ. ಶಿವಸೇನೆ ಸಣ್ಣಪುಟ್ಟ ಪಕ್ಷಗಳ ಜತೆ ಸೇರಿ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗಿದೆ.
ಮೈತ್ರಿ ಮುರಿಯಲು ಬಿಜೆಪಿಯೇ ಮುಂದಾಗುತ್ತಿದೆ. ಒಂದು ವೇಳೆ ಮೈತ್ರಿ ಮುರಿದು ಬಿದ್ದಲ್ಲಿ ಅದಕ್ಕೆ ಶಿವಸೇನೆ ಕಾರಣವಾಗುವುದಿಲ್ಲ, ಬಿಜೆಪಿ ತಪ್ಪು ಮಾಡುತ್ತಿದೆ. ಇದಕ್ಕೆ ಸಮರ್ಪಕ ಉತ್ತರ ನೀಡುವುದಾಗಿ ಶಿವಸೇನೆ ಗುಡುಗಿದೆ.