ನವದೆಹಲಿ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧದ ತೀರ್ಪನ್ನು ಬೇರೆಡೆ ಪ್ರಕಟಿಸಬೇಕೆಂದು ಕೋರಿ ವಕೀಲ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಜಯಲಲಿತಾ ಅಕ್ರಮ ಆಸ್ತಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಸೆ.27ರಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಹೊರಬೀಳಲಿದೆ. ಭದ್ರತಾ ದೃಷ್ಠಿಯಿಂದ ಬೇರೊಂದುಕಡೆ ಈ ತೀರ್ಪನ್ನು ಪ್ರಕಟಿಸಬೇಕು. ಈ ಪ್ರಕರಣದ ತೀರ್ಪನ್ನು ಬೇರೊಂದು ರಾಜ್ಯಕ್ಕೆ ವರ್ಗಾಯಿಸಬೇಕೆಂದು ಕೋರಿ ವಕೀಲ ಕೃಷ್ಣಮೂರ್ತಿ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕೃಷ್ಣಮೂರ್ತಿ ಮನವಿ ತಿರಸ್ಕರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಯಾವುದಾದರು ಬೆದರಿಕೆಯಿದೆಯೇ? ಅಥವಾ ನಿಮಗೇನಾದರೂ ಅಭದ್ರತೆ ಕಾಡುತ್ತಿದೆಯೇ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಜಯಲಲಿತಾ ಅವರು ತಮಗೆ ಭದ್ರತೆ ನೀಡುವಂತೆ ಯಾವುದೇ ಮನವಿ ಮಾಡಿಲ್ಲ, ಅವರಿಗೆ ಭದ್ರತೆ ನೀಡಬೇಕೆಂದು ಹೇಳಲು ನಿಮಗೇನು ಹಕ್ಕಿದೆ ಎಂದು ಕೃಷ್ಣಮೂರ್ತಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.
ನಾವು ತಮಿಳುನಾಡಿನ ಪ್ರಜೆಗಳಾಗಿರುವುದರಿಂದ, ನಮ್ಮ ಸಿಎಂ ಭದ್ರತೆ ಬಗ್ಗೆ ನಮಗೆ ಕಾಳಜಿಯಿದೆ. ಕಾವೇರಿ ನದಿ ವಿವಾದಕ್ಕೆ ಸಂಭಂಧಿಸಿದಂತೆ ಭದ್ರತೆ ಅಗತ್ಯವಿದ್ದು, ದಸರಾ ಹಿನ್ನಲೆಯಲ್ಲಿ ಜಯಲಲಿತಾ ಅವರಿಗೆ ಭದ್ರತೆ ನೀಡಲಾಗದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ರಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕೃಷ್ಣಮೂರ್ತಿ ವಾದ ಮಾಡಿದ್ದಾರೆ.
ಕೃಷ್ಣಮೂರ್ತಿ ವಾದವನ್ನು ಒಪ್ಪದ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ. ಅಲ್ಲದೇ ಪ್ರಕರಣ ತೀರ್ಪನ್ನು ಬೇರೆಡೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.