BW News Bureau : ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಅವ್ಯವಸ್ಥೆಗೆ ಮೇಯರ್ ಶಾಂತಾಕುಮಾರಿ, ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ತುರ್ತು ಸಭೆ ಕರೆದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನಪ್ರತಿನಿಧಿಗಳು ತಲೆತಗ್ಗಿಸುವಂತಾಗಿದೆ. ಕೆಲಸ ಮಾಡಲು ಸಾಧ್ಯವಿಲ್ಲವೆಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಗುಡುಗಿದ್ದಾರೆ.
ಮಳೆ ನಿರ್ವಹಣೆಗಾಗಿ ಸಮರ್ಪಕ ಅನುದಾನವಿದ್ದರೂ ಕೆಲಸ ಮಾಡಲು ನಿಮಗೇನು ? ರಾತ್ರಿ ಸುರಿದ ಮಳೆಯಲ್ಲಿ ಅಧಿಕಾಗಳು ನಿಯಂತ್ರಣ ಕೊಠಡಿಯಲ್ಲಿ ಇಲ್ಲದಿರಲು ಕಾರಣಗಳೇನು? ಮಳೆ ಸಮಸ್ಯೆ ಬಗೆಹರಿಯುವವರೆಗೂ ಬಿಬಿಎಂಪಿ ಅಧಿಕಾರಿಗಳಿಗೆ ರಜೆ ಇಲ್ಲ ಎಂದು ತಿಳಿಸಿದರು.
ಈ ವೇಳೆ ಕೆಲ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರೂ ಮೇಯರ್ ಶಾಂತಕುಮಾರಿ ಅವರ ಮಾತನ್ನು ಕೇಳಲು ನಿರಾಕರಿಸಿದರು. ಬಿಡಬ್ಲ್ಯೂ ಎಸ್ ಎಸ್ ಬಿ ವ್ಯಾಪ್ತಿಯ ಮ್ಯಾನ್ ಹೋಲ್ ಗಳನ್ನು ಸಮರೊಪಾದಿಯಲ್ಲಿ ಸ್ವಚ್ಛಗೊಳಿಸಬೇಕು. ಮಳೆ ಅವಾಂತರ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ಅನಾಹುತದ ಸಂದರ್ಭದಲ್ಲಿ ಕರ್ತವ್ಯ ಲೋಪ ವೆಸಗಿದ ಆರೋಪದಡಿ ಎಇಇ ಹೇಮಂತ್ ಕುಮಾರ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳಿಸುವಂತೆ ಮೇಯರ್, ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಅವರಿಗೆ ಆದೇಶಿಸಿದ್ದಾರೆ. ಮಳೆ ನೀರು ಚರಂಡಿ ನಿರ್ವಹಣೆ ವಿಭಾಗದ ಮುಖ್ಯ ಇಂಜಿನಿಯರ್ ಅನಂತಸ್ವಾಮಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.