ಬೆಂಗಳೂರು : ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಹೆಚ್.ಎಲ್.ದತ್ತು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಭಾರತದ 42ನೇ ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡಂತಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಜ್ನಾವಿಧಿ ಭೋಧಿಸಿದರು. ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಸೆ.27ರಂದು ನಿವೃತ್ತರಾದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಹೆಚ್.ಎಲ್.ದತ್ತು ನೇಮಕಗೊಂಡಿದ್ದಾರೆ.
ದತ್ತು ಮೂಲತ: ಕರ್ನಾಟಕದ ಬಳ್ಳಾರಿ ಸಮೀಪದ ಹಂದ್ಯಾಳು ಗ್ರಾಮದವರಾಗಿದ್ದಾರೆ. ದತ್ತು, ಭಾರತದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ನಾಲ್ಕನೇ ಕನ್ನಡಿಗ ಎಂಬುದು ಹೆಮ್ಮೆಯ ವಿಚಾರ. ಇವರು ಸಿವಿಲ್, ಕ್ರಿಮಿನಲ್, ತೆರಿಗೆ ಹಾಗೂ ಸಾಂವಿಧಾನಿಕ ವಿಷಯಗಳೂ ಸೇರಿದಂತೆ ಎಲ್ಲ ರಂಗಗಳಲ್ಲೂ ವ್ಯವಹರಿಸುವ ವೈಶಿಷ್ಟ್ಯ ಹೊಂದಿದ್ದಾರೆ. ಹೆಚ್.ಎಲ್.ದತ್ತು ಕಾರ್ಯಾವಧಿ 2015, ಡಿಸೆಂಬರ್ 2ವರೆಗೆ ಇರಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಹೆಚ್.ಎಲ್.ದತ್ತು ಹರ್ಷ ವ್ಯಕ್ತಪಡಿಸಿದ್ದು, ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಈ ಮಟ್ಟಕ್ಕೆ ಏರಿರುವುದು ನನಗೆ ಸಂತಸ ನೀಡಿದೆ ಎಂದಿದ್ದಾರೆ.