ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಆರಂಭವಾಗಿದೆ.
ರಜಾಕಾಲದ ಹೈಕೋರ್ಟ್ ಪೀಠ ವಿಚಾರಣೆ ನಡೆಸುತ್ತಿದ್ದು, 28 ಅರ್ಜಿಗಳ ವಿಚಾರಣೆಯಾದ ಬಳಿಕ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹಿರೀಯ ವಕೀಲ ರಾಮ್ ಜೇಠ್ಮಲಾನಿ ಜಯಲಲಿತಾ ಪರ ವಾದ ಮಂಡಿಸಲಿದ್ದಾರೆ.
ತಮ್ಮ ವಿರುದ್ಧದ ಶಿಕ್ಷೆ ರದ್ದು ಹಾಗೂ ತಮಗೆ ಜಾಮೀನು ನೀಡುವಂತೆ ಕೋರಿ ಜಯಲಲಿತಾ ಸೆ.29ರಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಹಾಗೂ ತೆರಿಗೆ ಪಾವತಿ ಮಾಡಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿರುವ ಜಯಲಲಿತಾ, ಆದಾಯ ತೆರಿಗೆ ಇಲಾಖೆ ಯಾವುದೇ ಆಕ್ಷೆಪಣೆ ಮಾಡಿಲ್ಲದರ ಬಗ್ಗೆಯೂ ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ತಮ್ಮ ಬಂಧನ ಹಿನ್ನಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಹೆಚ್ಚುತ್ತಿದ್ದು, ಸಾವು-ನೋವು ಸಂಭವಿಸುತ್ತಿದೆ. ಈ ಪರಿಸ್ಥಿತಿ ಮುಂದುವರೆದಿರೆ ರಾಜ್ಯದ ಆರ್ಥಿಕ ವ್ಯವಸ್ಥೆ ಬುಡಮೇಲಾಗಲಿದೆ. ಅಲ್ಲದೇ ತಮ್ಮ ಆರೋಗ್ಯ ಹದಗೆಟ್ಟಿದೆ. ಇವೆಲ್ಲವನ್ನೂ ಪರಿಗಣಿಸಿ ಜಾಮೀನು ನೀಡಬೇಕು. ಜಾಮೀನಿಗೆ ನೀಡುವ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಜಯಲಲಿತಾ ತಿಳಿಸಿದ್ದರು.
ಈ ಎಲ್ಲಾ ಕಾರಣಗಳಿಂದ ವಿಶೇಷ ನ್ಯಾಯಾಲಯ ಟಿರ್ಪು ಕಾನೂನು ಬಾಹಿರವಾಗಿದ್ದು, ತೀರ್ಪು ರದ್ದುಗೊಲಿಸಬೇಕು. ಹಾಗೂ ವಿಶೇಷ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಬೇಕು ಎಂದು ಕೋರಿದ್ದರು.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಸೆ.27ರಂದು ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ ದಂಡ ವಿಧಿಸಿತ್ತು.