ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಿನ್ನಲೆಯಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ನಾಳೆಯೇ ನಡೆಯಲಿದೆ.
ತೀರ್ಪು ರದ್ದು, ಶಿಕ್ಷೆ ಅಮಾನತು ಹಾಗೂ ಜಾಮೀನು ಕೋರಿ ಜಯಲಲಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ರಜಾಕಾಲದ ಪೀಠ, ಸರ್ಕಾರಿ ಅಭಿಯೋಜಕರ ಗೊಂದಲ ಹಿನ್ನಲೆಯಲ್ಲಿ ಅ.6ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.
ಆದರೆ ಅ.1ರಂದೇ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿ, ಜಯಲಲಿತಾ ಪರ ವಾದ ಮಂಡಿಸುತ್ತಿರುವ ಹಿರೀಯ ವಕೀಲ ರಾಮ್ ಜೇಠ್ಮಲಾನಿ ಸಲಹೆ ಮೇರೆಗೆ ರಿಜಿಸ್ಟ್ರಾರ್ ಜ್ಯೂಡಿಷಿಯಲ್ ಪಿ.ಎನ್.ದೇಸಾಯಿ ಹೈಕೋರ್ಟ್ ಮುಖ್ಯ ನ್ಯಾ.ಡಿ.ಹೆಚ್.ವಘೇಲಾ ಅವರಿಗೆ ಮನವಿ ಮಾಡಿದ್ದರು.
ಅಲ್ಲದೇ ಸಿಆರ್ ಪಿ ಸಿ ಸೆಕ್ಷನ್ 389ನ್ನು ಉಲ್ಲೇಖಿಸಿದ್ದ ರಾಮ್ ಜೇಠ್ಮಲಾನಿ, ಸರ್ಕಾರಿ ಅಭಿಯೋಜಕರ ನೇಮಕಕ್ಕೂ, ಜಾಮೀನಿಗೂ ಯಾವುದೇ ಸಂಬಂಧವಿಲ್ಲ. 10 ವರ್ಷಕಿಂತ ಕಡಿಮೆಶಿಕ್ಷೆಯಾದರೆ ಅಪರಾಧಿಗೆ ಜಾಮೀನು ನೀಡಬಹುದು. ಆಕ್ಷೇಪಣೆಯನ್ನು ಪರಿಗಣಿಸದೆ ಜಾಮೀನು ನೀಡುವ ಅಧಿಕಾರ ಹೈಕೋರ್ಟ್ ಗೆ ಇದೆ ಎಂಬುದನ್ನು ತಿಳಿಸಿದರು.
ಈ ಹಿನ್ನಲೆಯಲ್ಲಿ ನ್ಯಾ.ವಘೇಲಾ ಅವರ ಒಪ್ಪಿಗೆ ಮೇರೆಗೆ ನಾಳೆಯೇ ಹೈಕೋರ್ಟ್ ವಿಶೇಷ ಪೀಠದಲ್ಲಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.