BW News Bureau : ರಾಜ್ಯದ ರಾಜಧಾನಿಯ ಕಸವನ್ನು ಮಂಡೂರಿನಲ್ಲಿ ವಿಲೇವಾರಿ ಮಾಡುವುದನ್ನು ಡಿಸೆಂಬರ್ ಮುನ್ನವೇ ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ನಗರದ ಕಸ ವಿಲೇವಾರಿ ಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ರಾಮಸ್ಥರಿಗೆ ನೀಡಿದ ವಾಗ್ದಾನದಂತೆ ಮಾತ್ರವಲ್ಲದೆ, ನಿಗದಿಪಡಿಸಿದ ಗಡುವಿಗೆ ಮುನ್ನವೇ ಮಂಡೂರಿಗೆ ಕಸ ಸಾಗಿಸುವ ಪ್ರಕ್ರಿಯೆಯನ್ನು ಡಿಸೆಂಬರ್ 1 ಕ್ಕಿಂತಲೂ ಮೊದಲೇ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಂಡೂರಿಗೆ ಪ್ರತಿದಿನವೂ 1200 ಟನ್ ಕಸ ಸಾಗಣೆಯಾಗುತ್ತಿದೆ. ಈ ಕಸವನ್ನು ಬೇರೆಡೆ ಸ್ಥಳಾಂತರಿಸಿ ಸಂಸ್ಕರಣೆ ಮಾಡಲು ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೆ, ಮೆ : ಎಂ ಎಸ್ ಜಿ ಪಿ ಕಂಪನಿ 70 ಟನ್, ಮೆ : ಬಯೋ ಮೆಥನೇಷನ್ ಕಂಪನಿ 50 ಟನ್ ಹಾಗೂ ಮೆ : ಗ್ಲೋಬಲ್ ಎಕ್ಸ್ಚೇಂಜ್ ಕಂಪನಿ 50 ಟನ್ ಕಸ ಸಂಸ್ಕರಣೆ ಮಾಡಲಿದೆ. ಮಾವಳ್ಳಿಪುರ ಘಟಕವನ್ನು ಶೀಘ್ರವೇ ಪುನರಾರಂಭಿಸಿ 300 ಟನ್ ಕಸ ಸಾಗಿಸಲು ಯೋಜಿಸಲಾಗಿದೆ. ಮಂಡೂರು, ಬೆಂಕಿಪುರ, ಬಿಷ್ಯೀಪುರ ಘಟಕಗಳಿಗೆ ಕಸ ಸಾಗಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ ಪ್ರತಿದಿನ 4000 ಟನ್ ಕಸ ಉತ್ಪಾದನೆಯಾಗುತ್ತಿದೆ. ಕಸದ ಸಮರ್ಪಕ ವಿಲೇವಾರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಈ ವಿಷಯದಲ್ಲಿ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ 110 ವಾರ್ಡ್ಗಳಲ್ಲಿ ಹೊಸದಾಗಿ ಟೆಂಡರ್ ಕರೆಯಲಾಗುವುದು. ಸುಮಾರು 230 ಎಕರೆ ಪ್ರದೇಶದಲ್ಲಿ ಬೃಹತ್ ಕಲ್ಲುಗಣಿಗಳಿದೆ. ಅಲ್ಲಿ ಅಕ್ರಮವಾಗಿ ಕ್ರಷಿಂಗ್ ನಡೆಯುತ್ತಿದೆ. ಅಲ್ಲಿನ ಕಂದಕಗಳಲ್ಲಿ ಕಸ ಸುರಿದು ಸಮದಟ್ಟು ಮಾಡಲಾಗುವುದು. ನಂತರ, ಆ ಸ್ಥಳವನ್ನು ಇತರೆ ಉದ್ದೇಶಕ್ಕೂ ಬಳಕೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.