ನವದೆಹಲಿ : ನಮ್ಮ ಭೂ ಭಾಗ ಹಾಗೂ ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆತ್ಮರಕ್ಷಣೆಗಾಗಿ ಪಾಕ್ ಸೇನೆ ವಿರುದ್ಧ ಪ್ರತಿದಾಳಿ ನಡೆಸಲೇ ಬೇಕಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ ಗುಂಡಿನ ದಾಳಿ, ಶೆಲ್ ದಾಳಿ ನಡೆಸುತ್ತಿದೆ. ಇದರಿಂದಾಗಿ ನಮ್ಮ ಭೂ ಭಾಗ ಹಾಗೂ ಜನರ ಪ್ರಾಣಕ್ಕೆ ಹಾನಿಯಾಗಿದೆ. ಜನರು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಜನತೆಯ ಸ್ವಾತಂತ್ರ್ಯ ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.
ಭಾರತ ಇನ್ನೊಂದು ರಾಷ್ಟ್ರದ ಮೇಲೆ ದಾಳಿ ಮಾಡುವ ಸ್ವಭಾವನ್ನು ಹೊಂದಿಲ್ಲ, ಇದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು. ಭಾರತ ಒಂದು ಜವಾಬ್ದಾರಿಯುತ ದೇಶವಾಗಿದೆ. ಆದರೆ ಆತ್ಮರಕ್ಷಣೆಗಾಗಿ ಪ್ರತಿದಾಳಿನಡೆಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಪಾಕ್ ಸೇನೆ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ, ಉಗ್ರರ ಒಳನುಸುಳುವಿಕೆಗೂ, ಪಾಕ್ ಸೇನೆ ದಾಳಿಗೂ ನಂಟಿದೆ ಎಂದ ಜೇಟ್ಲಿ, ಪಾಕ್ ಸೇನೆ ತನ್ನ ಆಕ್ರಮಣಶೀಲತೆಯನ್ನು ತೋರುತ್ತಿದೆ. ನಮ್ಮ ಮುಂದಿರುವ ಒಂದು ಮಾರ್ಗವೆಂದರೆ ಅದು ಪ್ರತಿದಾಳಿಯಾಗಿದ್ದು, ಬಿಎಸ್ ಎಫ್ ಯೋಧರು ಪಾಕ್ ಸೇನೆಗೆ ಸಮರ್ಪಕ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಗಡಿಯಲ್ಲಿ ಗುಂಡಿನ ದಾಳಿ ನಡೆಯುತ್ತಿರುವಾಗ ಮಾತುಕತೆ ಹೇಗೆ ಸಾಧ್ಯವೆಂದು ಪ್ರಶ್ನಿಸಿರುವ ಅರುಣ್ ಜೇಟ್ಲಿ, ಪಾಕಿಸ್ತಾನ ಶಾಂತಿ ಬಯಸುವುದಾದರೆ ತಕ್ಷಣ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ನಿಲ್ಲಿಸಲಿ. ಇಲ್ಲವಾದಲ್ಲಿ ಭಾರತ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.