ಬೆಂಗಳೂರು : ಕೈಗಾರಿಕೆಗಳು ಹಾಗೂ ಮಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರದಿಂದ ನೀಡಲಾಗಿರುವ ಭೂಮಿಯನ್ನು ನಿಗದಿತ ಸಮಯದಲ್ಲಿ ಬಳಸಿಕೊಳ್ಳದಿದ್ದರೆ ಅವುಗಳನ್ನು ವಾಪಸ್ ಪಡೆಯಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ.
ಸರ್ಕಾರಿ ಜಮೀನನ್ನು ನಿರ್ದಿಷ್ಟ ಸಮಯದಲ್ಲಿ ಬಳಸಿಕೊಳ್ಳದಿದ್ದಲ್ಲಿ ಅಂತಹ ಭೂಮಿ ಹಿಂಪಡೆಯಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಈ ಕಾಯ್ದೆ ಸರ್ಕಾರಿ ಜಮೀನು ಮಾರಾಟ ಮಾಡುವ ಯಾವುದೇ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಿದೆ.
ಆದರೆ ಧಾರ್ಮಿಕ ಸಂಸ್ಥೆಗಳು ಮತ್ತು ಉದ್ದಿಮೆದಾರರು ಪಡೆದ ಜಮೀನನ್ನು ಸರ್ಕಾರಕ್ಕೆ ಮಾತ್ರ ಅವರು ಕೊಂಡ ಬೆಲೆಯಲ್ಲೇ ಮಾರಾಟ ಮಾಡಬಹುದು ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಸರ್ಕಾರ ನೀಡಿದ ಜಮೀನನ್ನು ಬಳಸಿಕೊಳ್ಳಲು 10 ವರ್ಷ ಸಮಯ ನೀಡಲಾಗಿದ್ದು, ಅಷ್ಟರಲ್ಲಿ ಅವರು ರೂಪಿಸಿದ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಸರ್ಕಾರ ಜಮೀನು ವಾಪಸ್ ಪಡೆಯಲಿದೆ. ಇದರಿಂದ ಸರ್ಕಾರಿ ಜಮೀನು ದುರ್ಬಳಕೆಯಾಗುವುದನ್ನು ತಡೆಯಬಹುದು ಎಂದು ಹೇಳಿದರು.