ಶ್ರೀಹರಿಕೋಟಾ : 'ಐ.ಆರ್.ಎನ್.ಎಸ್.ಎಸ್ -1ಸಿ' ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಇಸ್ರೋ, ಅ.16ರಂದು ಯಶಸ್ವಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ್.ಎಲ್.ವಿ.ಸಿ -26 ವಾಹಕದ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.
ಈ ಮೂಲಕ ಭಾರತ ತನ್ನ 3ನೇ ನ್ಯಾವಿಗೇಶನ್ ಸ್ಯಾಟಲೈಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸತತ 67 ಗಂಟೆಗಳ ಕಾಲ ಪ್ರಯತ್ನದ ನಂತರ ಎಕ್ಸೆಲ್ ಆವೃತ್ತಿಯ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡುವಲ್ಲಿ ಇಸ್ರೋ ಯಶಸ್ವಿಯಾಗಿದೆ.
ಹಾಸನ ಜಿಲ್ಲೆಯಲ್ಲಿರುವ ನಿಯಂತ್ರಣ ಕೇಂದ್ರದ ಮೂಲಕ ಉಪಗ್ರಹದ ಮೇಲೆ ನಿಯಂತ್ರಣ ಸಾಧಿಸಲಾಗಿದ್ದು 1,425 ಕೆ.ಜಿ ತೂಕದ ಈ ಉಪಗೃಹ ಉಡಾವಣೆಯಾದ 20 ನಿಮಿಷಗಳ ನಂತರ ನಿಗದಿತ ಕಕ್ಷೆಗೆ ಸೇರಿದೆ. ಉಪಗ್ರಹ ಕಕ್ಷೆಗೆ ಸೇರಿದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಯೋಜನೆಗೆ ಶ್ರಮಿಸಿದ ಎಲ್ಲವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಯೋಜನಾ ನಿರ್ದೇಶಕ ಜಯಕುಮಾರ್, ಐ.ಆರ್.ಎನ್.ಎಸ್.ಎಸ್ ಸರಣಿಯ ಇನ್ನೂ ನಾಲ್ಕು ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ ಎಂದು ತಿಳಿಸಿದ್ದಾರೆ. ಉಪಗ್ರಹದ ಉಡಾವಣೆ ವೇಳೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದು, ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.