ಬೆಂಗಳೂರು : ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣಕ್ಕೆ ನಿಷೇಧ ಹೇರುವ ಬಗ್ಗೆ ರಾಜ್ಯ ಸರ್ಕಾರ, ಈ ತಿಂಗಳ ಕೊನೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ವಾಣಿಜ್ಯ ಚಿತ್ರಗಳ ಚಿತ್ರೀಕರಣದಿಂದ ಪಾರಂಪರಿಕ ತಾಣಾಗಳಿಗೆ ಹಾನಿಯುಂಟಾಗುತ್ತಿರುವ ಕಾರಣದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೇ ಚಿತ್ರೀಕರಣದಿಂದ ಪಾರಂಪರಿಕ ತಾಣಗಳಿಗೆ ಹಾನಿ ಉಂಟಾಗುತ್ತಿರುವ ಬಗ್ಗೆ ಪ್ರವಾಸಿ ತಾಣದ ಅಧಿಕಾರಿಗಳು ಸರ್ಕಾರಕ್ಕೆ ದೂರು ನೀಡಿರುವುದೂ ಈ ಆದೇಶ ಹೊರಡಿಸಲು ಕಾರಣ ಎಂದು ಹೇಳಲಾಗಿದೆ.
ವಾಣಿಜ್ಯ ಚಿತ್ರಗಳ ಬದಲು, ಪ್ರವಾಸಿ ತಾಣಗಳಿಗೆ ಉತ್ತೇಜನ ನೀಡುವ ಚಿತ್ರಗಳಿಗೆ ಚಿತ್ರೀಕರಣ ನಡೆಸಲು ಅವಕಾಶ ನೀಡುವ ಸಾಧ್ಯತೆಗಳಿದೆ.
ಈ ಹಿಂದೆಯೂ ರಾಜ್ಯ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಇಂತಹದ್ದೇ ಪ್ರಸ್ತಾವನೆ ಮುಂಡಿಟ್ಟಿದ್ದರು. ಆದರೆ ಚಿತ್ರರಂಗದಿಂದ ಸರ್ಕಾರದ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.