ಚಾಂದಿಪುರ, ಒಡಿಶಾ : ಪರಮಾಣು ಅಸ್ತ್ರವನ್ನು ಹೊತ್ತೊಯ್ಯಬಲ್ಲ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಇಂದು ಯಶಸ್ವಿಯಾಗಿ ಮಾಡಲಾಯಿತು. ಅತಿ ಆಧುನಿಕವಾದ ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ. (ರಕ್ಷಣಾ ಅನ್ವೇಷಣೆ ಮತ್ತು ಅಭಿವೃದ್ಧಿ ಸಂಸ್ಥೆ) ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಡಿಶಾದ ಬಾಲಾಸೋರ್ ನ ಚಾಂದಿಪುರ ಉಡಾವಣಾ ಕ್ಷೇತ್ರದಿಂದ ಈ ಕ್ಷಿಪಣಿಯನ್ನು ಶುಕ್ರವಾರ ಬೆಳಗ್ಗೆ ಉಡಾಯಿಸಲಾಯಿತು.
ನಿರ್ಭಯ ಕ್ಷಿಪಣಿಯು ಹಲವಾರು ವಿಶೇಷ ಕ್ಷಮತೆಗಳಿಂದ ಕೂಡಿದ್ದು ಅತ್ಯಾಧುನಿಕ ಯುದ್ಧಾಸ್ತ್ರಗಳಲ್ಲೊಂದಾಗಿದೆ ಎನ್ನಲಾಗಿದೆ. ಇದು ಅತಿ ಕಡಿಮೆ ಎತ್ತರದಲ್ಲೂ ಹಾರಬಲ್ಲದ್ದಾಗಿದ್ದು, ಅತ್ಯಾಧುನಿಕ ರಾಡಾರ್ ಗಳ ಕಣ್ಣುಗಳಿಗೂ ನಿಲುಕದು!. 700 ಕಿ.ಮಿ ಗೂ ಹೆಚ್ಚು ದೂರದ ಗುರಿಯನ್ನು ತಲುಪುವ ಈ ಕ್ಷಿಪಣಿ ಪರಮಾಣು ಯುದ್ಧಾಸ್ತ್ರವನ್ನು ಕೊಂಡೊಯ್ಯುವ ಸಾಮಾರ್ಥ್ಯ ಹೊಂದಿದೆ. ಭಾರತದ ವೈರಿ ದೇಶಗಳ ಅತಿ ದೂರದ ಗುರಿಯನ್ನು ಇದು ತಲುಪಬಹುದಾಗಿದ್ದು, ಇದರಿಂದ ಭಾರತ ರಕ್ಷಣಾ ಸಾಮರ್ಥ್ಯ ಇನ್ನಷ್ಟು ಹೆಚ್ಚಿದಂತಾಗುತ್ತದೆ.
ಭಾರತ ತನ್ನದೇ ಆದ ಉಪಗ್ರಹ ನ್ಯಾವಿಗೇಶನ್ ಸರಣಿಯನ್ನು ನಿರ್ಮಾಣ ಮಾಡುತ್ತಿದೆ. ಕೆಲವೇ ಸಮಯದಲ್ಲಿ ಇದು ಸಂಪೂರ್ಣವಾಗಲಿದ್ದು, ಇದರಿಂದಾಗಿ ಭವಿಷ್ಯದ ಕ್ಷಿಪಣಿಗಳು ಬಾಹ್ಯಾಕಾಶದಲ್ಲಿರುವ ನಮ್ಮ ಉಪಗ್ರಹಗಳು ಕಳಿಸುವ ಸಿಗ್ನಲ್ ಗಳನ್ನು ಬಳಸಿ ವೈರಿ ದೇಶಗಳ ಗುರಿಯನ್ನು ತಲುಪಬಹುದಾಗಿದೆ.
ಇನ್ನೂ ವಿಶೇಷವೆಂದರೆ, ನಿರ್ಭಯ ಕ್ಷಿಪಣಿಗಳು ಇತರ ಬ್ಯಾಲ್ಲಿಸ್ಟಿಕ್ ಕ್ಷಿಪಣಿಗಳಿಗಿಂತ ಭಿನ್ನವಾಗಿದ್ದು, ಇದಕ್ಕೆ ರೆಕ್ಕೆಗಳು ಮತ್ತು ಬಾಲವೂ ಇದೆ. ಇದು ಉಡಾವಣೆಯ ನಂತರ ವಿಮಾನದ ಮಾದರಿಯಲ್ಲಿ ಚಲಿಸುತ್ತದೆ ಮತ್ತು ಗುರಿಯನ್ನು ತಲುಪಿದ ನಂತರ ಅದರ ಸುತ್ತ ಸುತ್ತಬಲ್ಲದು ಹಾಗೂ ಸರಿಯಾದ ಸಮಯಕ್ಕೆ, ಸರಿಯಾದ ದಿಕ್ಕಿನಿಂದ ಗುರಿಯನ್ನು ಹೊಡೆಯಬಲ್ಲದು!
ಕಳೆವ ವರ್ಷ, ಮಾರ್ಚ್ 12, 2013ರಂದು ತನ್ನ ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲಿ ಈ ಕ್ಷಿಪಣಿ ವಿಫಲವಾಗಿತ್ತು. ಉಡಾವಣೆಯ 20 ನಿಮಿಷಗಳ ನಂತರ ತನ್ನ ಹಾರಾಟದ ಮಾರ್ಗದಿಂದ ವಿಮುಖವಾದ ಕಾರಣ ಅದರ ಇಂಜಿನ್ ಅನ್ನು ಸ್ಥಗಿತಗೊಳಿಸಿ ಸುರಕ್ಷಿತವಾಗಿ ದಡಕ್ಕೆ ತರಲಾಗಿತ್ತು.
ನಿರ್ಭಯ ಒಂದು ಬಹುಪಯೋಗಿ ಸಬ್-ಸೋನಿಕ್ (ಶಬ್ದದ ವೇಗದಿಂದ ಸ್ವಲ್ಪ ಕಡಿಮೆ ವೇಗದಿಂದ ಹಾರಬಲ್ಲ) ಕ್ಷಿಪಣಿಯಾಗಿದ್ದ್ಫು, ಇದು ಭಾರತದ ರಕ್ಷಣಾ ಪಡೆಗಳಿಗೆ ಅತಿ ಮಹತ್ವದ ಕೊಡುಗೆಯಾಗಲಿದೆ ಎನ್ನಲಾಗಿದೆ. ಇದನ್ನು ಅತಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದ್ದು, ಬಹುವಿಧ ಉಡಾವಣಾ ಕ್ಷೇತ್ರಗಳಿಂದ ಉಡಾಯಿಸಬಹುದಾಗಿದೆ. ಅಲ್ಲದೆ ಇದನ್ನು ಮೊಬೈಲ್ ಲಾಂಚರ್ (ಸಂಚಾರಿ ಉಡಾವಣಾಗಾರ) ಗಳಿಂದಲೂ ಹಾರಿಬಿಡಬಹುದು ಮತ್ತು ವೈರಿಪಡೆ ಇದರ ಕಂಪ್ಯೂಟರ್ ವ್ಯವಸ್ಥೆಯನ್ನು ಜ್ಯಾಮ್ ಮಾಡಲಾಗದು.
ಡಿ.ಆರ್.ಡಿ.ಒ ಸಂಸ್ಥೆಯ ವಿಜ್ನಾನಿಗಳು ನಿರ್ಭಯ ಕ್ಷಿಪಣಿಯ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸಿದ್ದಾರೆ. ಅದರ ಫಲವಾಗಿ ಭಾರತದ ಸೇನಾಪಡೆಗಳಿಗೆ ಅತ್ಯಂತ ಕ್ಷಮತೆಯ, ಬಹು ನಿರೀಕ್ಷೆಯ ಶಸ್ತ್ರವೊಂದು ಒದಗಿದಂತಾಗಿದೆ.
ಗಲ್ಫ್ ಯುದ್ಧದಲ್ಲಿ ಅಮೆರಿಕ ಸೇನೆಯು ಇಂಥ ಕ್ಷಿಣಿಯನ್ನು ಬಹಳ ಸಂಖ್ಯೆಯಲ್ಲಿ ನಿಯೋಜಿಸಿತ್ತು. ನಿರ್ಭಯ ಕ್ಷಿಪಣಿಯು ಅಮೆರಿಕದ ಟಮಾಹಾಕ್ ಮತ್ತು ಪಾಕಿಸ್ತಾನದ ಬಾಬರ್ ಕ್ಷಿಪಣಿಗಳಿಗೆ ಉತ್ತರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಕನಸಿಗೆ ಇದೊಂದು ಕೊಡುಗೆಯಾಗಿದೆ ಎನ್ನಬಹುದು.