ನವದೆಹಲಿ : ವಿಧಾನಪರಿಷತ್ ಚುನಾವಣೆ ವೇಳೆ ವೋಟಿಗಾಗಿ ನೋಟು ಪ್ರಕರಣವನ್ನು ಪ್ರಸ್ತಾಪಿಸಿದ್ದ ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಿಸ್ತುಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಇಲಾಖೆ ಮುಖ್ಯ ಚುನಾವಣಾ ಆಯುಕ್ತರಿಗೆ ಸೂಚನೆ ನೀಡಿದೆ.
ಎಮ್.ಎಲ್.ಸಿ ಸೀಟ್ ಗಾಗಿ ಡೀಲ್ ಪ್ರಕರಣ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ, ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ವಿ.ಎಸ್.ಸಂಪತ್ ಅವರಿಗೆ 10 ಪುಟಗಳ ಪತ್ರ ಬರೆದಿರುವ ಗೋಸ್ವಾಮಿ, ಜನಪ್ರತಿನಿಧಿಗಳೇ ಮತ ಹಾಕಲು ಹಣ ಕೇಳುತ್ತಾರೆ ಎಂದಾದರೆ ಮತದಾರರಲ್ಲು ಇದೇ ಅಭಿಪ್ರಾಯ ಮೂಡುತ್ತದೆ. ಇದು ಚುನಾವಣಾ ಪದ್ಧತಿಯನ್ನೇ ಪ್ರಶ್ನಿಸುವಂತಿದೆ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ಸೀಟ್ ಗಾಗಿ ಹೆಚ್.ಡಿ.ಕುಮಾರಸ್ವಾಮಿ ವಿಜುಗೌಡ ಪಾಟೀಲ್ ರವರಿಗೆ ಹಣ ಕೇಳಿದ್ದರು ಹಾಗೂ ಪ್ರತಿ ಶಾಸಕರಿಂದ 1 ಕೋಟಿಯಂತೆ ಒಟ್ಟು 47 ಕೋಟಿ ರೂ ಹಣ ಪಡೆಯಲಾಗುತ್ತಿದೆ ಎಂಬ ಸಂಭಾಷಣೆಯುಳ್ಳ ಸಿಡಿ ಜು.5ರಂದು ಬಿಡುಗಡೆಯಾಗಿತ್ತು. ವೋಟ್ ಗಾಗಿ ಶಾಸಕರು ಹಣ ಕೇಳುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ಎಮ್.ಎಲ್.ಸಿ ಸೀಟ್ ನೀಡಬೇಕಾಗುತ್ತದೆ ಎಂಬ ಸಂಭಾಷಣೆಯ ವಿವರ ಸಿಡಿಯಲ್ಲಿ ಬಹಿರಂಗವಾಗಿತ್ತು. ಅಲ್ಲದೇ ಸ್ವತ: ಕುಮಾರಸ್ವಾಮಿಯವರೇ ತಮ್ಮ ಹೇಳಿಕೆಯನ್ನು ನಿಜ ಎಂದು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.