ನವದೆಹಲಿ : 'ಚೀನಾ'ದೊಂದಿಗೆ ಭಾರತ ಉತ್ತಮ ಸಂಬಂಧ ಮುಂದುವರೆಸಲು ಇಚ್ಚಿಸುತ್ತದೆ. ಆದರೆ ಪ್ರಾದೇಶಿಕ ಸಾರ್ವಭೌಮತ್ವದ ಬಗ್ಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ಪಷ್ಟಪಡಿಸಿದ್ದಾರೆ.
ಅ.21ರಂದು ನಡೆದ ಮ್ಯುನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ದೋವಲ್, ಚೀನಾದೊಂದಿಗೆ ಉತ್ತಮ ಸಂಬಂಧ ಮುಂದುವರೆಸಲು ಎಲ್ಲಾ ಅವಕಾಶಗಳನ್ನೂ ನಾವು ಬಳಸಿಕೊಳ್ಳುತ್ತೇವೆ ಆದರೆ ಗಡಿ ವಿವಾದವೂ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗುವ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಚೀನಾ ನಮ್ಮ ಪ್ರಮುಖ ನೆರೆ ರಾಷ್ಟ್ರ, ಈ ಹಿಂದೆ ಕೆಲ ವಿವಾದಗಳಿಂದ ಉಭಯ ರಾಷ್ಟ್ರಗಳಿಗೂ ಕೆಲವು ಕಹಿ ಅನುಭವಗಳುಂಟಾಗಿವೆ. ಆದರೆ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು, ಈ ವಿಷಯದಲ್ಲಿ ಚೀನಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದೆ ಎಂದಿದ್ದಾರೆ.
ಭಯೋತ್ಪಾದನೆಯಷ್ಟೇ ಸೈಬರ್ ಸ್ಪೇಸ್ ಮತ್ತು ಕಡಲ ಭದ್ರತೆಯೂ ಗಂಭೀರ ವಿಷಯವಾಗಿದೆ ಎಂದಿರುವ ದೋವಲ್, ಭಯೋತ್ಪಾದನೆಯನ್ನು ನಿಗ್ರಹಿಸಲು ಸಾಧ್ಯವಿದೆ. ಆದರೆ ಸೈಬರ್ ಸ್ಪೇಸ್ ಮೂಲಕ ಅಪಾಯಗಳನ್ನು ಸೃಷ್ಠಿಸುವ ಶತೃ ನಮಗೆ ಕಾಣುವುದಿಲ್ಲ. ಸೈಬರ್ ಸ್ಪೇಸ್ ಮೂಲಕ ಎಲ್ಲಿಂದಲೂ ಭದ್ರತಾ ವ್ಯವಸ್ಥೆ, ಸರ್ಕಾರಿ ವಾಹನಗಳು, ವಿದ್ಯುತ್ ಉತ್ಪಾದನೆಯನ್ನು ಶತೃಗಳು ಟಾರ್ಗೆಟ್ ಮಾಡಬಹುದಾಗಿದೆ ಎಂದು ಅಜಿತ್ ದೋವಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಇದೇ ವೇಳೆ ತಿಳಿಸಿರುವ ದೋವಲ್, ಭಯೋತ್ಪಾದನೆ ನಿಗ್ರಹದ ಬಗ್ಗೆ ವಿಶ್ವಸಂಸ್ಥೆ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳೂ ನಿರ್ಣಯ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.