ಮುಂಬೈ : 'ಮಹಾರಾಷ್ಟ್ರ'ದಲ್ಲಿ ಸರ್ಕಾರ ರಚನೆ ಬಗ್ಗೆ ಶಿವಸೇನೆ ಹಾಗೂ ಬಿಜೆಪಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗುವ ಸೂಚನೆ ದೊರೆತಿದೆ. ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ಜೊತೆಜೊತೆಗೇ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಪ್ರಾರಂಭವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಿ.ಎಂ ಹುದ್ದೆ ರೇಸ್ ನಲ್ಲಿ ದೇವೇಂದ್ರ ಫಡ್ನವೀಸ್ ಹೆಸರು ಕೇಳಿಬರುತ್ತಿದೆ.
ಯಾವ ಪಕ್ಷದ ಬೆಂಬಲವೂ ಪಡೆಯದೇ ಮಹಾರಾಷ್ಟ್ರದಲ್ಲಿ ಸ್ವತಂತ್ರ ಸರ್ಕಾರ(ಮೈನಾರಿಟಿ ಸರ್ಕಾರ) ರಚಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮಹಾರಾಷ್ಟ್ರದ ಕೆಲವು ಶಾಸಕರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿಯಾಗುವಂತೆ ಒತ್ತಾಯಿಸಿದ್ದರು. ಆದರೆ ಸಿ.ಎಂ ಹುದ್ದೆ ಆಕಾಂಕ್ಷಿ ನಾನಲ್ಲ. ನಾನು ದೆಹಲಿಯಲ್ಲೇ ಸಂತೋಷದಿಂದ ಇದ್ದೇನೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿ.ಎಂ ಹುದ್ದೆ ರೇಸ್ ನಲ್ಲಿ ದೇವೇಂದ್ರ ಫಡ್ನವೀಸ್ ಹೆಸರು ಇನ್ನೂ ಚಾಲ್ತಿಯಲ್ಲಿದೆ.
ಫಡ್ನವೀಸ್, ಮಹಾರಾಷ್ಟ್ರದಲ್ಲಿ ನಿತಿನ್ ಗಡ್ಕರಿ ಅವರಷ್ಟೇ ಪ್ರಭಾವಿಯಾಗಿರುವುದರಿಂದ ಅನಾಯಾಸವಾಗಿ ಅವರಿಗೆ ಸಿ.ಎಂ ಹುದ್ದೆ ಒಲಿಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಗಡ್ಕರಿ ಅವರಂತೆಯೇ ಫಡ್ನವೀಸ್ ಕೂಡ ವಿದರ್ಭ ಕ್ಷೇತ್ರದವರು. ದೇವೇಂದ್ರ ಫಡ್ನವೀಸ್ ಎಲ್ಲಾ ರೀತಿಯಲ್ಲೂ ಗಡ್ಕರಿಯವರಷ್ಟೇ ಸಮರ್ಥರಾಗಿದ್ದು, ಸ್ವತಃ ನಿತಿನ್ ಗಡ್ಕರ್ ಸಿ.ಎಂ ಹುದ್ದೆ ರೇಸ್ ನಿಂದ ಹಿಂದೆ ಸರಿದಿರುವುದರಿಂದ ಫಡ್ನವೀಸ್ ಗೆ ಅನುಕೂಲವಾಗಲಿದೆ.