ನವದೆಹಲಿ : ಕಪ್ಪುಹಣ ಇಟ್ಟವರ ಕೆಲವರ ಹೆಸರನ್ನು ಬಹಿರಂಗ ಪಡಿಸಿದರೆ ಕಾಂಗ್ರೆಸ್ ಗೆ ಭಾರೀ ಮುಜುಗರವಾಗಲಿದೆ ಎಂಬ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು, ಕಪ್ಪುಹಣ ಖಾತೆದಾರರ ಹೆಸರನ್ನು ತಕ್ಷಣ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್, ಅರುಣ್ ಜೇಟ್ಲಿ ಜನರನ್ನು ವಂಚಿಸುತ್ತಿದ್ದಾರೆ. ಕಪ್ಪುಹಣ ಇಟ್ಟವರ ಖಾತೆದಾರರ ಹೆಸರು ಸರ್ಕಾರದ ಬಳಿ ಇದ್ದರೆ ಖಂಡಿತವಾಗಿ ಅದನ್ನು ಬಹಿರಂಗಪಡಿಸಬಹುದು. ಆದರೆ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜೇಟ್ಲಿ ಕಾಂಗ್ರೆಸ್ ನ್ನು ಬ್ಲಾಕ್ ಮೇಲ್ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿಯವರು, ಬಿಜೆಪಿ ಅಧಿಕಾರಕ್ಕೆ ಬಂದರೆ 100ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಎನ್ ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 150ದಿನಗಳೂ ಕಳೆದಿವೆ ಆದರೂ ಸಾಧ್ಯವಾಗಿಲ್ಲ, ಈಗ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ದೇಶದ್ರೋಹಿ, ದೇಶದ್ರೋಹಿಯೇ. ಅವರು ಕಾಂಗ್ರೆಸ್ ನವರಾದರೂ ಆಗಿರಲಿ, ಇಲ್ಲ ಬಿಜೆಪಿಯವರೇ ಆಗಿರಲಿ ಅಂತಹ ಮೋಸಗಾರರ ಹೆಸರನ್ನು ಬಹಿರಂಗಪಡಿಸಲು ಜೇಟ್ಲಿಯವರನ್ನು ತಡೆಯುತ್ತಿರುವವರಾದರೂ ಯಾರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸತವ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಜನರಿಗೆ ಸುಳ್ಳು ಹೇಳಿ ವಂಚಿಸುವುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮೊದಲು ನಿಲ್ಲಿಸಲಿ. ಮೋದಿ ತಮ್ಮ ಪ್ರಚಾರ ಸಭೆಗಳಲ್ಲಿ ಭರವಸೆಕೊಟ್ಟಂತೆ ನಾಗರಿಕರ ಅಕೌಂಟ್ ಗೆ 3 ಲಕ್ಷ ರೂ ಯಾವಾಗ ಜಮಾವಣೆ ಮಾಡುತ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಕಪ್ಪುಹಣ ಇಟ್ಟ ಕೆಲ ಹೆಸರುಗಳನ್ನು ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗುವುದು. ಈ ಹೆಸರುಗಳು ಕಾಂಗ್ರೆಸ್ ಗೆ ಭಾರೀ ಮುಜುಗರವನ್ನುಂಟುಮಾಡಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದರು.