ನವದೆಹಲಿ : 'ಅಯೋಧ್ಯೆ'ಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಮತ್ತೆ ಚರ್ಚೆಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು ಬಿಜೆಪಿ ಈಗಲಾದರೂ ಈಡೇರಿಸಬೇಕೆಂದು ಸಿಂಘಾಲ್ ತಿಳಿಸಿದ್ದಾರೆ.
1999-2004ರವರೆಗೆ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ, ಸೆಕ್ಯುಲರ್ ಮಿತ್ರ ಪಕ್ಷಗಳ ಒತ್ತಡದ ಕಾರಣ ನೀಡಿ ರಾಮಮಂದಿರ ನಿರ್ಮಾಣ ಮಾಡಿರಲಿಲ್ಲ. ಆದರೆ ಇದೀಗ ಅಸ್ಥಿತ್ವಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ರಾಮಮಂದಿರ ನಿರ್ಮಾಣ ಮಾಡಲು ಯಾವುದೇ ಮಿತ್ರಪಕ್ಷಗಳ ಒತ್ತಡ ಇರುವುದಿಲ್ಲ ಎಂದು ಸಿಂಘಾಲ್ ತಿಳಿಸಿದ್ದಾರೆ.
ಕೂಡಲೇ ಮೋದಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ತೊಡಕುಗಳನ್ನು ನಿವಾರಿಸಿ, ಕಾನೂನು ಚೌಕಟ್ಟಿನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಅಶೋಕ್ ಸಿಂಘಾಲ್ ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಆರ್.ಎಸ್.ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಮಂದಿರ ನಿರ್ಮಾಣ ಮಾಡಲು ಮೋದಿ ಸರ್ಕಾರಕ್ಕೆ 2019ರ ವರೆಗೆ ಕಾಲಾವಕಾಶವಿದೆ ಎಂದು ಹೇಳಿದ್ದರು.