ಬೆಂಗಳೂರು : ಆರೋಗ್ಯ ಇಲಾಖೆಯಲ್ಲಿನ ನೇಮಕಾತಿ ವಿಳಂಬಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಗರಂ ಆಗಿದ್ದು, ಇಲಾಖೆಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯರು, ದಾದಿಯರ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ವಿವರಣೆ ಕೇಳಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸ್ಪೀಕರ್, ಆಸ್ಪತ್ರೆಗಳಲ್ಲಿ ವೈದ್ಯರು , ದಾದಿಯರ ಕೊರತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೇಮಕಾತಿ ವಿಳಂಬಕ್ಕೆ ಆರೋಗ್ಯ ಇಲಾಖೆ ಹಾಗೂ ಹಣಕಾಸು ಇಲಾಖೆ ನಡುವಿನ ಭಿನ್ನಾಭಿಪ್ರಾಯವಿದೆಯೇ ಎಂದು ಕೇಳಿದ್ದಾರೆ. ಈ ಬಗ್ಗೆ ಸಮಜಾಯಿಷಿ ನೀಡೀರುವ ಸಚಿವರು ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸ್ಪೀಕರ್ ಭೇಟಿ ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್, ಆರೊಗ್ಯ ಇಲಾಖೆಯಲ್ಲಿ ವೈದ್ಯರು, ದಾದಿಯರ ನೇಮಕಾತಿ ವಿಳಂಬಕ್ಕೆ ಸ್ಪೀಕರ್ ಬೇಸರ ವ್ಯಕ್ತಪಡಿಸಿರುವುದು ನಿಜ. ಸ್ಪೀಕರ್ ಅವರಿಗೆ ವಾಸ್ತವ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ಆರೋಗ್ಯ ಇಲಾಖೆ ಹಾಗೂ ಹಣಕಾಸು ಇಲಾಖೆಗಳ ನಡುವೆ ಯಾವುದೇ ಭಿನಾಭಿಪ್ರಾಯಗಳೂ ಇಲ್ಲ, ಶೀಘ್ರದಲ್ಲಿಯೇ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.