ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ಕ್ಕೆ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಗುಂಡಿನ ದಾಳಿ ನಡೆಸದೇ ಇದ್ದ ಪಾಕ್ ಯೋಧರು, ಅ.25ರಂದು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.
ಜಮ್ಮು ಪ್ರದೇಶದಲ್ಲಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಕಳೆದ ರಾತ್ರಿ ಪೂಂಚ್ ಜಿಲ್ಲೆಯಲ್ಲೂ ಸಹ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ ಎಂದು ಸೇನಾಧಿಕಾರಿ ಮನೀಶ್ ಮೆಹ್ತಾ ಹೇಳಿದ್ದಾರೆ.
ಪಾಕ್ ಸೈನಿಕರು ರಾತ್ರಿ 8:30ರ ವೇಳೆಗೆ ಅಪ್ರಚೋದಿತ ದಾಳಿ ನಡೆಸಲು ಪ್ರಾರಂಭಿಸಿದ್ದು ಇನ್ನೂ ದಾಳಿ ಮುಂದುವರೆದಿದೆ. ಕದನ ವಿರಾಮ ಉಲ್ಲಂಘನೆ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕ್ ವಿರುದ್ಧ ಆರೋಪಿಸಿದ್ದ ಭಾರತದ ವಿರುದ್ಧ ಅ.24ರಂದು ಪಾಕಿಸ್ತಾನ ಸಂಸತ್ ನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅಲ್ಲದೇ ಈ ನಿರ್ಣಯದಲ್ಲಿ ಕಾಶ್ಮೀರ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆ ಮೊರೆ ಹೋಗಲೂ ನಿರ್ಣಯ ಕೈಗೊಳ್ಳಲಾಗಿತ್ತು.