ಬೆಂಗಳೂರು : ವೈದ್ಯರ ಬೇಡಿಕಗಳನ್ನು ಸರ್ಕಾರ ಈಡೇರಿಸದ ಹಿನ್ನಲೆ ಸಾಮೂಹಿಕ ರಾಜೀನಾಮೆ ನೀಡಲು ಸರ್ಕಾರಿ ವೈದ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.
ತುರ್ತುಸೇವೆ ಸಲ್ಲಿಸುವ ವೈದ್ಯರು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದು, ಗ್ರಾಮ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಈಗಾಗಲೇ ತಮ್ಮ ರಾಜೀನಾಮೆ ಕಳುಹಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದಿದ್ದಾರೆ.
ರಾಜ್ಯಾಧ್ಜ್ಯಂತ 4,500ಕ್ಕೂ ಅಧಿಕ ಸರ್ಕಾರಿ ವೈದ್ಯರು, 17,000 ಖಾಸಗಿ ವೈದ್ಯರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅ.27ರಂದು ರಾಜೀನಾಮೆ ಅಂಗಿಕಾರವಾದರೆ ಒಂದುತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಈ ಅವಧಿಯಲ್ಲಿ ಬೇಡಿಕೆ ಈಡೇರಿದರೆ ರಾಜ್ಯ ವೈದ್ಯಾಧಿಕಾರಿಗಳ ಸಂಘದ ನಿರ್ಧಾರದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ.ರವೀಂದ್ರ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯಲ್ಲಿಯೇ ಉಳಿಸಿಕೊಳ್ಳಬೇಕು, ಜಿ.ಪಂ.ವ್ಯಾಪ್ತಿಯ ಆಸ್ಪತ್ರೆಗಳಿಗೆ ನೇರವಾಗಿ ವೇತನ ಬಿಡುಗಡೆ ಮಾಡಬೇಕು, ಎಲ್ಲಾ ಖಾಲಿ ಹುದ್ದೆ ಭರ್ತಿ, ಮೂರು ವರ್ಷ ಪೂರ್ಣಗೊಳಿಸಿದ ಗುತ್ತಿಗೆ ವೈದ್ಯರ ಕಾಯಂ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ನಡುವಿನ ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂಬುದು ವೈದ್ಯರ ಬೇಡಿಕೆಯಾಗಿದೆ.
ವೈದ್ಯರುಗಳ ಬೇಡಿಕೆಗೆ ಬಗ್ಗದ ಆರೋಗ್ಯ ಇಲಾಖೆ ರಾಜೀನಾಮೆ ನೀಡುವುದಿದ್ದರೆ ನೀಡಿ ಎಂದು ಹೇಳಿದೆ. ಅಲ್ಲದೇ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದೆ. ಈ ಸಂಬಂಧ ವಿಕಾಸಸೌಧದಲ್ಲಿ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಯಲಿದೆ.